ಡಿಸಿಗಳೊಂದಿಗೆ ಪಿಎಂ ವಿಡಿಯೋ ಸಂವಾದ: ತಮ್ಮ ಜಿಲ್ಲೆ ಗೆದ್ದರೇ ದೇಶ ಗೆದ್ದಂತೆ: ಪ್ರಧಾನಮಂತ್ರಿ ನರೇಂದ್ರ ಮೋದಿ

ಬಳ್ಳಾರಿ: “ಕೋವಿಡ್ ಸರಪಳಿಯನ್ನು ತುಂಡರಿಸುವ ನಿಟ್ಟಿನಲ್ಲಿ ತಮ್ಮ ತಮ್ಮ ಜಿಲ್ಲೆಗಳ ಸವಾಲುಗಳೇನು ಎಂಬುದು ತಮಗೆ ಚೆನ್ನಾಗಿ ಗೊತ್ತಿರುತ್ತದೆ;ತಾವು ಈ ಕೊರೊನಾ ಯುದ್ದದಲ್ಲಿ ಫಿಲ್ಡ್ ಕಮಾಂಡರ್ ಗಳಾಗಿ ಫ್ರಂಟ್‍ಲೈನ್ ವಾರಿಯರ್ಸ್‍ಗಳು ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಭಿನ್ನ ಯೋಜನೆ,ಆಲೋಚನೆಗಳ ಮೂಲಕ ಸೊಂಕನ್ನು ತಡೆಗಟ್ಟಿ. ತಮ್ಮ ಜಿಲ್ಲೆ ಗೆದ್ದರೇ ಇಡೀ ದೇಶವೇ ಗೆದ್ದಂತೆ…”
ಹೀಗೆಂದು ಜಿಲ್ಲಾಧಿಕಾರಿಗಳನ್ನು ಹುರಿದುಂಬಿಸಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು.
ಅತಿಹೆಚ್ಚು ಕೊರೊನಾ ಸೊಂಕಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು,ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಮಂಗಳವಾರ ಏರ್ಪಡಿಸಿದ್ದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಕೋವಿಡ್ ಹೋರಾಟದಲ್ಲಿ ಜಿಲ್ಲಾಧಿಕಾರಿಗಳ ಇದುವರೆಗಿನ ಪರಿಶ್ರಮ ಕೊಂಡಾಡುತ್ತಲೇ ಮುಂದೆಯೂ ಇದೇ ರೀತಿ ಕಾರ್ಯನಿರ್ವಹಿಸುವಂತೆ ಹುರಿದುಂಬಿಸಿದ್ದು ಕಂಡುಬಂದಿತು.
ಕೋವಿಡ್ ಸಂದಿಗ್ಧ ಸಮಯದಲ್ಲಿ ಅತ್ಯಂತ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದೀರಿ;ಬಹಳಷ್ಟು ಜನರು ತಮ್ಮ ಮನೆಗಳಿಗೆ ಹೋಗಿಲ್ಲ;ಮನೆಯ ಸದಸ್ಯರನ್ನು ಭೇಟಿಯಾಗಿಲ್ಲ;ಅನೇಕರು ಸೊಂಕಿಗೆ ತುತ್ತಾದರೂ ಗುಣಮುಖರಾಗಿ ಮತ್ತೇ ಎಂದಿನಂತೆ ಕರ್ತವ್ಯಕ್ಕೆ ಮರಳಿದ್ದೀರಿ ಎಂದು ಡಿಸಿಗಳ ಕೆಲಸವನ್ನು ಶ್ಲಾಘಿಸಿದ ಪಿಎಂ ಅವರು ಕೋವಿಡ್ ಮಹಾಮಾರಿ ಕಟ್ಟಿಹಾಕುವ ನಿಟ್ಟಿನಲ್ಲಿ ನಡೆಸುತ್ತಿರುವ ಈ ಹೋರಾಟದಲ್ಲಿ ನವೀನ ಆಲೋಚನೆಗಳು,ಅವಿಷ್ಕಾರಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ, ತಮ್ಮ ಈ ನವೀನ ಆಲೋಚನೆಗಳು ಬೇರೆ ಜಿಲ್ಲೆಗಳಿಗೆ ಮಾದರಿಯಾಗಲಿದೆ ಎಂದರು.
ಈ ಮಾದರಿ ಅಳವಡಿಕೆಗೆ ಸಹಕಾರಿಯಾಗುವುದರ ಜೊತೆಗೆ ಇಡೀ ದೇಶಕ್ಕೆ ಅತ್ಯುಪಯುಕ್ತವಾಗಲಿ ಎಂದು ಆಶಿಸಿದರು.
ನನ್ನ ಹಳ್ಳಿ ಕೊರೊನಾ ಮುಕ್ತ ಮಾಡುವೆ;ಕೊರೊನಾ ಬರದಂತೆ ತಡೆಗಟ್ಟುವ ಪ್ರತಿಜ್ಞೆ ತೊಡಿ:
ನನ್ನ ಹಳ್ಳಿ ಕೊರೊನಾ ಮುಕ್ತ ಮಾಡುವೆ ಮತ್ತು ಕೊರೊನಾ ಸೊಂಕು ನನ್ನ ಗ್ರಾಮಕ್ಕೆ ಬರದಂತೆ ತಡೆಗಟ್ಟುವೆ ಎಂಬ ಪ್ರತಿಜ್ಞೆಯನ್ನು ಜನರು ತೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಪ್ರಧಾನಿ ನಮೋ ಅವರು ಹೇಳಿದರು. ಕೊರೊನಾ ಸೊಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸ್ಥಳೀಯ ಕಂಟೈನ್ಮೆಂಟ್ ವಲಯಗಳನ್ನು ಗುರುತಿಸಿ ಮತ್ತು ಟೆಸ್ಟಿಂಗ್ ಕೂಡ ಪರಿಣಾಮಕಾರಿಯಾಗಿ ಕೈಗೊಳ್ಳಿ ಎಂದರು.
ಕೊರೊನಾ ಮುಕ್ತ ಗ್ರಾಮಕ್ಕೆ ಸಂಕಲ್ಪಿಸುವುದರ ಜೊತೆಗೆ ಲಸಿಕಾ ಅಭಿಯಾನ ಚುರುಕುಗೊಳಿಸಲು ನಿರ್ದೇಶನ ನೀಡಿದರು.
ಕೋವಿಡ್ ಕುರಿತು ಗ್ರಾಮಿಣ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಬೇಕು ಮತ್ತು ಈ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಪ್ರತಿ ಜಿಲ್ಲೆಗಳಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ: ಪಿಎಂ ಕೇರ್ಸ್ ಫಂಡ್ ನಿಧಿಯಿಂದ ದೇಶದ ಪ್ರತಿ ಜಿಲ್ಲೆಗಳಲ್ಲಿಯೂ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಶೀಘ್ರ ಸ್ಥಾಪನೆ ಮಾಡುವುದಾಗಿ ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದರು.
ಪ್ರತಿ ಜಿಲ್ಲೆಯಲ್ಲಿ ಆಕ್ಸಿಜನ್ ಮಾನಿಟರಿಂಗ್ ಕಮಿಟಿ ಕಾರ್ಯಾರಂಭ ಮಾಡಬೇಕು.ಲಸಿಕಾ ಅಭಿಯಾನವನ್ನು ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳುವಂತೆ ಸೂಚನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೊರೊನಾದ ವಿರುದ್ಧದ ನಮ್ಮ ಹೋರಾಟ ಸೊಂಕು ತಡೆಗಟ್ಟುವುದರ ಜೊತೆಗೆ ಒಂದೊಂದು ಅಮೂಲ್ಯ ಜೀವ ಉಳಿಸುವುದಾಗಿದೆ ಎಂದರು.
ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಸಹಭಾಗಿತ್ವ ಅಗತ್ಯ ಎಂಬುದನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗ್ರಾಪಂ ಸದಸ್ಯನಿಂದ ಹಿಡಿದು ಸಂಸತ್ ಸದಸ್ಯನವರೆಗೆ ಎಲ್ಲರ ಸಹಭಾಗಿತ್ವದೊಂದಿಗೆ ಕಾರ್ಯನಿರ್ವಹಿಸಿ ಎಂದು ಅವರು ಸಲಹೆ ನೀಡಿದರು.
ವಿಡಿಯೋ ಸಂವಾದದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಗ್ ಚವ್ಹಾಣ ಸೇರಿದಂತೆ 10 ರಾಜ್ಯಗಳ ಮುಖ್ಯಮಂತ್ರಿಗಳು,ಕರ್ನಾಟಕದ 17ಜಿಲ್ಲೆಗಳು ಸೇರಿದಂತೆ 46 ಜಿಲ್ಲೆಗಳ ಜಿಲ್ಲಾಧಿಕಾರಿಗಳು,ಜಿಲ್ಲಾ ಉಸ್ತುವಾರಿ ಸಚಿವರು ಇದ್ದರು.
ಬಳ್ಳಾರಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಎಸ್ಪಿ ಸೈದುಲು ಅಡಾವತ್, ಡಿಎಚ್‍ಒ ಡಾ.ಜನಾರ್ಧನ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *