Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೩೩೯, ಕವಿ:ಕಳಕೇಶ್ ಗೊರವರ, ಬೆಂಗಳೂರು, ಕವನದ ಶೀರ್ಷಿಕೆ: ಅವ್ವನ ಕಣ್ಣೊಳಗೂ ಒಲೆ.... - Karnataka Kahale

ಅನುದಿನ ಕವನ-೩೩೯, ಕವಿ:ಕಳಕೇಶ್ ಗೊರವರ, ಬೆಂಗಳೂರು, ಕವನದ ಶೀರ್ಷಿಕೆ: ಅವ್ವನ ಕಣ್ಣೊಳಗೂ ಒಲೆ….

ಅವ್ವನ ಕಣ್ಣೊಳಗೂ ಒಲೆ….


ಇತ್ತೀಚೆಗೆ,
ನನ್ನೂರಿಗೆ ಹೋಗಿ ಬಂದೆ.
ಕಣ್ಣು ಹಾಯಿಸಿದಲೆಲ್ಲ ಕರಿ ಹೊಲ,
ಹೊಲತುಂಬ ಓಡ್ಯಾಡುವ ಬಿಸಿಲುಗುದುರೆ.

ದೂರದಲ್ಲೆಲ್ಲೊ ಊಳಿಡುವ ನವಿಲುಗಳು,
ಹಸಿವನ್ನೇ ಮೇವಾಗಿಸಿಕೊಂಡ ಜಾನುವಾರು,
ನೆರಳು ಸುಳಿದಲ್ಲಿ
ಅರೆಬೆತ್ತಲೆಯ ಪಾಪದ ಜನರು.

ವಸಂತನ ದಾರಿ ಕಾದು ಕಾದು
ಸೂರ್ಯ ಕೆಂಡವಾದ.
ಬಂದವನು ಓಡುನಡಿಗೆಯಲೇ ಹೋದ.
ಬಿಸಿಲುಂಡ ಧರೆಯ
ದಾಹ ನೀಗದ ನಿರ್ದಯಿಯಾದ.

ನೇಗಿಲ ಮೊನೆ ನಾಟಿತಷ್ಟೆ,
ಬೀಜ ಮೊಳಕೆಯೊಡೆಯಲಿಲ್ಲ.
ಸಾಲ
ಯಾರ ಮುಲಾಜಿಗೂ ಕಾಯದೆ
ಬೆಳೆದು ಬೇಲಿ ದಾಟಿತು.

ಪಡಸಾಲೆಯಲಿ ನೋವು ನರಳುತ್ತಿದೆ.
ಒಲೆ ಮುಂದೆ ಕುಂತ
ಅವ್ವನ ಕಣ್ಣೊಳಗೂ ಒಲೆ ಉರಿಯುತ್ತಿದೆ.
ಅಪ್ಪ, ಸೋತ ಜೂಜುಗಾರ..
ಆತನ ನಿಟ್ಟುಸಿರ ಕಿಡಿಗಳು
ಜ್ವಾಲೆಯಾಗಿ ಸುಡಲಿವೆ

ಸುಮ್ಮನೆ ಕೂಡಲಾಗದ ದುಡಿಯುವ ಕೈಗಳು,
ಒಟ್ಟಿದ ನಿಟ್ಟಿನ ನೆನಪುಗಳ
ಹಿಡಿ ಹಿಡಿ ಹರವಿ ಹಂಚಿಕೊಳ್ಳುತ್ತವೆ.
ನಿಜಕ್ಕೂ ಇವು ನೆನಪಲ್ಲ ಬಾಳಿನ ಆಸೆಗಳು..

ಹಾಗೆ ನೋಡಿದರೆ
ಅಲ್ಲಿ ಎಲ್ಲವೂ ಸರಿಯಿಲ್ಲ.
ಆದರೆ ಅದ್ಯಾಕೊ
ಎಂದಿಗಿಂತ ಊರ ದಾರಿಯೇ
ಕೈ ಬೀಸಿ ಕರೆದು ಇನ್ನಿಲ್ಲದಂತೆ ಕಾಡುತ್ತಿದೆ.


-ಕಳಕೇಶ್ ಗೊರವರ, ಬೆಂಗಳೂರು
*****