ಅನುದಿನ ಕವನ-೪೫೯, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಜಿಂದಾಲ್, ತೋರಣಗಲ್ಲು, ಕವನದ ಶೀರ್ಷಿಕೆ: ಕನಸ ಹನಿ

ಕನಸ ಹನಿ

ನೆನಪಿನ ಕಣ್ಣ ಕನಸಿಗೆ
ಕಣ್ರೆಪ್ಪೆ ಜಿಗಿದು
ತುಂಟಾಟವಾಡಿ ಸಣ್ಣ
ಹನಿ ಹೊರ ಬಂದು
ನಲಿದಾಡಿದೆ….

ಜೀವ ಚಪ್ಪರದ ಹಾದಿಗೆ
ಯಜ್ಞಕುಂಡದ ಭಾದೆ
ಬಿಳಿಯ ಬಾಳೆ ದಿಂಡಿಗೆ
ಮುಳ್ಳ ಗುಲಾಬಿಯ ಸೆಳೆತ
ಹಸಿರ ಹಂದಿರ ಗರಿಗೆ
ಅರಿಶಿಣ ಕೊಂಬು ವ್ಯಂಗ್ಯವಾಗಿ
ಕುಲುಕುತಿದೆ…

ಏಕೋ ಮನ ನೋಯುತಿದೆ
ಹೇಳುವ ಪದಗಳಿಗೆ
ಭಾಗ್ಯದ ಬಾಗಿಲು ಕದ ಮುಚ್ಚಿ
ಹಿಸುಕುತಿದೆ..

ಎಣಿಸ ಲಾರದ ಹೊಡೆತದಿ
ಒಲವ ನೌಕೆಯಲಿ
ದೇಹ ಬಾಗದೆ ಪುಂಡಾಟಿಕೆಯ
ಮೊಂಡು ತಲೆಯೆತ್ತಿ ಬೀಗುತಿದೆ….

ಹಾವಳಿಯ ರಾಷ್ಟ್ರದಿ
ಮಧ್ಯಮದ ಭಾದೆ
ಯಾರು ಇಲ್ಲದ ಖಾಲಿ ಮನೆಯ
ಬೀಡಾಗಿದೆ…

ಹೊಲಿಕೆಗೂ ಮಿತಿ ಮೀರದ
ಕನಸು ,ಸಿಗರೇಟ ಹೊಗೆಯ
ಜೊತೆಗೆ ಸ್ಪಂದಿಸುತಿದೆ….

ನ್ಯಾಯದ ತಟ್ಟೆಗೆ ಕಲ್ಲು
ಇಟ್ಟಿಗೆಯ ಸವಿಯೂಟ
ಅರ್ಧ ರಾತ್ರಿಯ ಬದುಕ
ಕೃಷಿಯಲ್ಲಿ ಚರ್ಮ
ಸವೆದು ಬಳಲಿದೆ….

ಕಾಲದ ಚೌಕಟ್ಟ ಹಳೆಯ
ಬೆಸುಗೆ , ಶಿಲ್ಪಿಯ ಸುತ್ತಿಗೆಯಲಿ
ಉಳಿಯ ಬಲೆಗೆ ಮೊನಚಾಗಿದೆ…

ಉರಿಬಿಸಿಲ ನಡುವೆ
ಹಸಿರೆಲೆಯ ಬಣ್ಣದಿ
ನವ ಭ್ರೂಣ ಹೊಸ ಹೆಜ್ಜೆಯ
ಹಾಲ್ಕಡಲ ಅಂದಿಗೆ ಕೌದಿಯ
ನೆಲದಿ ತಾಕುತಿದೆ…..

-ಡಾ. ಕೃಷ್ಣವೇಣಿ ಆರ್ ಗೌಡ, ಜಿಂದಾಲ್
*****

Leave a Reply

Your email address will not be published. Required fields are marked *