ಅನುದಿನ ಕವನ-೫೩೮, ಕವಯತ್ರಿ: ಲಾವಣ್ಯ ಪ್ರಭ, ಮೈಸೂರು

ಮಳೆಗೆ ತೊಯ್ದು ಬಿಸಿಲಲ್ಲಿ ಕಾದು
ಹದಗೊಂಡ ರಾತ್ರಿರಾಣಿಯ
ಒಡ್ಡೋಲಗದಲ್ಲಿ…..

ಇರುಳು ಹೊರಳಿದಷ್ಟೂ ಹೊತ್ತು
ಮತ್ತಷ್ಟು ಮಗದಷ್ಟು
ಆವರಿಸುತ್ತಾ ಪಿಸುಮಾತಿನಲ್ಲೇ
ಸವಿಮುತ್ತನೊತ್ತಿ
ಕಾಡಿಸುವ ಚಂದಿರನ ಸಂಭ್ರಮಕೆ
ಹಾಡು ಹಸೆ ಹಿನ್ನೆಲೆಯಲ್ಲಿ
ನಕ್ಷತ್ರ ನಿಹಾರಿಕೆಗಳ ಸಡಗರ

ಮಧುವನದ ತುಂಬೆಲ್ಲಾ ಗಿಲಿಗಿಲಿ
ಗಿಲಕಿ ಗಿರಕಿ ಹೊಡೆದು
ಬೆಳದಿಂಗಳಿನುಯ್ಯಾಲೆಯಲಿ
ರಾಗ ಅನುರಾಗದ ಕೊರಳು
ಮಿಡಿದ ಕವಿತೆಗಳ
ಮಾಯದ ನೆರಳಲ್ಲಿ
ನಾಗಸ್ವರದಲೆ ಅಲೆ ತೇಲಿ….

ರೆಕ್ಕೆಯಗಲಿಸಿದ ಬಾನಹಕ್ಕಿಯ
ಹೂದೋಟದಲ್ಲಿ ನೆನಪು ಕನಸುಗಳ
ಸುಖಮೇಳ
ಹುಣ್ಣಿಮೆಯ ರಾತ್ರಿಯಲ್ಲಿ
ಹನಿಹನಿ ಹಿಮ್ಮೇಳ

ಚಂದಿರನೂರಿನ ತುಂಬೆಲ್ಲಾ
ಈಗ
ಭರಪೂರ ಪ್ರೇಮೋತ್ಸವ……

-ಲಾವಣ್ಯ ಪ್ರಭ, ಮೈಸೂರು
*****

Leave a Reply

Your email address will not be published. Required fields are marked *