Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೬೧೪. ಕವಿ: ಕೇಶವರೆಡ್ಡಿ ಹಂದ್ರಾಳ್, ಬೆಂಗಳೂರು - Karnataka Kahale

ಅನುದಿನ ಕವನ-೬೧೪. ಕವಿ: ಕೇಶವರೆಡ್ಡಿ ಹಂದ್ರಾಳ್, ಬೆಂಗಳೂರು

ಒಲಿಯಬೇಕು ಕವಿತೆ ಒಲಿದಂತೆ ಚೆಲುವಿನ ವನಿತೆ; ಒಲಿಯಬೇಕು ವನಿತೆ ಒಲಿದಂತೆ ನವನವೀನ ಕವಿತೆ, ಹಚ್ಚಿದಂತೆ ಕತ್ತಲಲ್ಲಿ ಸಂಭ್ರಮದ ಒಲವಿನ ಪ್ರೀತಿಯ ಹಣತೆ…

ತೊನೆಯಬೇಕು ಕವಿತೆ ತೊನೆದಂತೆ ಮೀನಕಣ್ಣಿನ ಹೆಣ್ಣು; ತೊನೆಯಬೇಕು ಹೆಣ್ಣು ತೊನೆದಂತೆ ಮರದಲ್ಲಿನ ತಾಜಾ ಹಣ್ಣು.. ಮುಂಗಾರಿನ ಮೊದಲ ಹನಿಗಳಿಗೆ ತೆರೆದುಕೊಂಡಂತೆ ಕಾದ ಮಣ್ಣು…

ಬಿರಿಯಬೇಕು ಕವಿತೆ ಒಲವ ತುಂಬಿದ ಮನದನ್ನೆಯ ತನು – ಮನವಿನಂತೆ; ಬಿರಿಯಬೇಕು ಕವಿತೆ ಮಲ್ಲಿಗೆ ಸಂಪಿಗೆಯ ಸುಗಂಧದ ಸವಿಯಂತೆ ; ನಮ್ಮ ಚಂದ್ರಮಳ ನಸು ನಗುವು ಮರುಕಳಿಸಿ ಎದುರು ನಿಂತು ಮೆಲ್ಲನೆ ಕರೆವಂತೆ…

ಅರಳಬೇಕು ಕವಿತೆ ಕಾಮನಬಿಲ್ಲಿನ ಬಣ್ಣಗಳಂತೆ
ಹರಡಬೇಕು ಕವಿತೆ ಆಗಸದ ನಕ್ಷತ್ರಗಳು ಬೆಳಕು ಹಂಚಿ ನಗುವ ಚೆಲ್ಲುವಂತೆ, ಕಡಲಿನೆಗಳು ಕುಲುಕುಲು ಕುಣಿದು ಖುಷಿಯನ್ನು ಎದೆಗೆ ಎಸೆಯುವಂತೆ…

ನರ್ತಿಸಬೇಕು ಕವಿತೆ ಜೋಗಜಲಪಾತದಂತೆ ; ಉಂಚಳ್ಳಿಯ ನೀರೆ ನೀರು ಚಿಮ್ಮುವಂತೆ; ಗಗನ ಚುಕ್ಕಿ ಭರಚುಕ್ಕಿ ನೊರೆ ನೊರೆಯ ನಲಿವ ಸುರಿದಂತೆ ಕಾವ್ಯ ಕನ್ನಿಕೆ ನಕ್ಕು ನೀರಾಗುವಂತೆ…

ಕೆರಳಬೇಕು ಕವಿತೆ ಫ್ರಾನ್ಸಿನ ಮಹಾಕ್ರಾಂತಿಯ ಆಶಯಗಳ ಅಕ್ಷರಗಳಂತೆ ; ಮುಡಿಯಬೇಕು ಕವಿತೆ ಗಾಂಧಿ, ಮಾರ್ಕ್ಸ್, ಬುದ್ದ, ಬಸವ, ಅಂಬೇಡ್ಕರ್ ನುಡಿಮುತ್ತುಗಳನ್ನು ಎಂದೂ ಬಾಡದಂತೆ ; ಇರಬೇಕು ಕವಿತೆ ಭೂಮಿಗೂ ಮುಗಿಲಿಗೂ ಹೂವ ಏಣಿಯಂತೆ…


-ಕೇಶವರೆಡ್ಡಿ ಹಂದ್ರಾಳ್, ಬೆಂಗಳೂರು
*****