ಹೊಸಪೇಟೆ, ಜೂ. 27: ಎನ್. ಬಿ. ಎ.ಮಾನ್ಯತೆ ಪಡೆದಿರುವ ನಗರದ ಟಿ.ಎಂ.ಎ.ಇ.ಎಸ್. ಪಾಲಿಟೆಕ್ನಿಕ್ ನಲ್ಲಿ ಗುರುವಾರ 2025-26 ನೇ ಸಾಲಿಗೆ ಮೊದಲ ವರ್ಷಕ್ಕೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಹೆಚ್. ಕೆ. ಶಂಕರಾನಂದ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ನಿಮ್ಮ ಆಯ್ಕೆ ಯಾವ ವಿಭಾಗವಾದರೂ ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆಯಿರಲಿ ಎಂದು ಹೇಳಿದರು.
ನಿಮ್ಮ ಸಾಧನೆ ಇತರರಿಗೆ ಮಾದರಿಯಾಗ ಬೇಕೆಂದು ಕಿವಿ ಮಾತು ಹೇಳಿದರು.
ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಪಾಲಕ, ಪೋಷಕರಲ್ಲಿ ಮನವಿ ಮಾಡಿದರು.
ಸಂಸ್ಥೆಯ ಉಪಕಾರ್ಯದರ್ಶಿ ಟಿ. ಎಂ. ವಿಜಯ್ ಕುಮಾರ್ ಅವರು ಈ ಕಾಲೇಜಿನಲ್ಲಿ ಜ್ಞಾನಾರ್ಜನೆ ಪಡೆದಿರುವ ಹಲವಾರು ವಿದ್ಯಾರ್ಥಿಗಳು ಇಂದು, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ಗುರುತಿಸಿ ಕೊಂಡಿದ್ದಾರೆ. ಬರೀ ಅಂಕಗಳನ್ನು ಗಳಿಸುವುದು ಗುರಿ ಆಗಿರದೇ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡರೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು. ಕಾಲೇಜಿನ ಉಪ ಪ್ರಾಚಾರ್ಯ ನಜಿರುದ್ದೀನ್ ಅವರು ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ನಾವು ನಡೆದುಕೊಳ್ಳುವ ರೀತಿ ನಮ್ಮನ್ನು ಗುರುತಿಸುವಂತೆ ಮಾಡುತ್ತದೆ ಎಂದು ತಿಳಿಸಿದರು.
ಪ್ಲೇಸ್ ಮೆಂಟ್ ಹಿನ್ನೆಲೆಯಲ್ಲಿ ವಿವಿಧ ಕಂಪನಿಗಳ ಬಗ್ಗೆ ಮಾಹಿತಿ ನೀಡಿದರು. ಸಮಯ ಪಾಲನೆ, ಸಮವಸ್ತ್ರದ ಬಗ್ಗೆ ಮಾರ್ಗದರ್ಶನ ಹಾಗೂ ಜೀವನದ ಮೌಲ್ಯಗಳ ಬಗ್ಗೆ ಉಪಕಥೆಗಳ ಮೂಲಕ ತಿಳಿಸಿದರು.
ಕಛೇರಿಯ ಅಧೀಕ್ಷಕ ನಿಂಗಪ್ಪ ಅವರು ಮಾತನಾಡಿದರು. ವೇದಿಕೆಯಲ್ಲಿ ವಿವಿಧ ವಿಭಾಗದ ಮುಖ್ಯಸ್ಥರಾದ ಧನಂಜಯ್, ಲಕ್ಷ್ಮೀರೆಡ್ಡಿ, ಚಂದ್ರಶೇಖರ್, ಮಹೇಶ್ ಕುಮಾರ್, ಯೋಗಾನಂದ, ಡಾ. ಶಿವರಾಜ್, ಗ್ರಂಥಪಾಲಕ ಯೋಗೀಶ್ವರ್ ಉಪಸ್ಥಿತರಿದ್ದರು.
ಉಪನ್ಯಾಸಕಿ ಯಮುನಾ ಕುಲಕರ್ಣಿ ಪ್ರಾರ್ಥಿಸಿದರು. ಉಪನ್ಯಾಸಕ ಗವಿಸಿದ್ದೇಶ ಹನುಮನಾಳ್ ಸ್ವಾಗತಿಸಿದರು. ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಶಿವರಾಜ್ ಹಾಗೂ ಯಮುನಾ ಅವರು ನಿರೂಪಿಸಿದರು. ಕಛೇರಿ ಅಧೀಕ್ಷಕ ಶಿವಕುಮಾರ ಅವರು ವಂದಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಮತ್ತು ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಮತ್ತು ಪಾಲಕ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.