ಅನುದಿನ ಕವನ-೭೪೬, ಕವಿ: ಡಾ.ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ಗಜಲ್

ಗಜಲ್…

ಮದಿರೆಯ ಬಟ್ಟಲೊಂದು ಸದ್ದಿಲ್ಲದೆ ಅನಾಥವಾಗಿ ಬಿದ್ದಿದೆ
ಮುಂಜಾವು ಪಾರಿಜಾತದ ಹೂವೊಂದು ಏಕಾಂತವಾಗಿ ಬಿದ್ದಿದೆ

ಹಸಿರು ಎಲೆಯೊಂದು ಬಾಡಿ ಮೂಕವಾಗಿ ಬಿದ್ದಿದೆ
ಸುಟ್ಟ ಗುಡಿಸಲಲಿ ನಗು ಶವವಾಗಿ ಬಿದ್ದಿದೆ

ಮಳೆ ಸುರಿದ ಗಳಿಗೆ ಗೋಡೆಯೊಂದು ಮೌನವಾಗಿ ಬಿದ್ದಿದೆ
ಮೋಹಕ ಕಣ್ಣ ಹೊಳಪು ಚರಮಗೀತೆಯಾಗಿ ಬಿದ್ದಿದೆ

ಕಾಲ ಜಾರಿದರೂ ನೆನಪೊಂದು ಮುಳ್ಳಾಗಿ ಬಿದ್ದಿದೆ
ತಂಗಾಳಿಯಲೂ ಪ್ರೀತಿದ್ರೋಹ ನೋವಾಗಿ ಬಿದ್ದಿದೆ

ಸಖಿಯ ಓಲೆ ಬಟವಾಡೆಯಾಗದೆ ವ್ಯಥೆಯಾಗಿ ಬಿದ್ದಿದೆ
ನೀನಿಲ್ಲದೆ ಇರುಳು ಚಹರೆ ಕಳಕೊಂಡು ಕರಕಾಗಿ ಬಿದ್ದಿದೆ

     -ಡಾ. ದಸ್ತಗೀರಸಾಬ್ ದಿನ್ನಿ, ಬಳ್ಳಾರಿ

*****

 

Leave a Reply

Your email address will not be published. Required fields are marked *