ಅನುದಿನ ಕವನ-೧೨೦೨, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ನನ್ನ ಅಂಬೇಡ್ಕರ…..

ನನ್ನ ಅಂಬೇಡ್ಕರ….

ಅಸಾಧ್ಯವಾದದ್ದನ್ನು
ಸಾಧ್ಯವಾಗಿಸಿದ
ಜಗತ್ತಿನೊಬ್ಬ ನಾಯಕ
ನನ್ನ ಅಂಬೇಡ್ಕರ…

ಜನರ ತೋರುಬೆರಳಲ್ಲಿ
ದೇಶದ ಭವಿಷ್ಯದ
ಬಟನ್ ಒತ್ತಿಸಿದ ಛಲಗಾರ
ನನ್ನ ಅಂಬೇಡ್ಕರ…

ನೀಲಿಶಾಹಿ ಹಿಡಿದು
ಬಿಳಿಹಾಳೆಯ ಮೇಲೆ
ಬದುಕಿನಕ್ಷರಗಳ ಮೂಡಿಸಿ
ಗುಡಿಸಲಿನಲ್ಲಿ ಕತ್ತಲೆನಿಸಿ ಕುಂತ
ಈ ನೆಲದ ಶೋಷಿತ ಅಸ್ಪೃಶ್ಯರಿಗೆ
ಸಮಾನತೆಯ ಚಂದಿರನಾಗಿ
ಹೊಳೆಹೊಳೆದವನು ನನ್ನ ಅಂಬೇಡ್ಕರ…

ತಾನೆ ಬರೆದ ಪುಸ್ತಕ
ಈ ದೇಶದ ಶೋಷಿತ
ಬಡಜನರ ನೊಂದ ಎಲ್ಲರ
ಕಾಯಲೆಂದು ಸದಾ ಎಚ್ಚರವಾಗಿ
ಸಂವಿಧಾನದ ರೂಪದಲ್ಲಿ
ನೆರಳಾಗಿ ನಿಂತವ ನನ್ನ ಅಂಬೇಡ್ಕರ…

ರಾಜನೂ ಅಷ್ಟೆ
ಮಂತ್ರಿಯೂ ಅಷ್ಟೆ
ಕೋಟ್ಯಾದೀಶ
ಧನಿಕ ಮಹಾಶಯ
ಅಗರ್ಭ ಶ್ರೀಮಂತಿಕೆಯಲ್ಲಿ ತೇಲಿದ
ಪಟೇಲ
ಊರಗೌಡ
ಯಜಮಾನ
ಶಾನುಭೋಗ
ಎಲ್ಲರು ಅಷ್ಟೆ
ಮತಾಧಿಪತಿಯ ಮುಂದೆ
ಕಾಲಾಯ ತಸ್ಮೈ ನಮಃ ದೊಳಗೆ
ಕೈ ಮುಗಿದು ಕಾಲಿಡಿದು ನಿಲ್ಲುವಂತೆ
ಮಾಡಿದ್ದು ನನ್ನ ಅಂಬೇಡ್ಕರ…


-ಸಿದ್ದುಜನ್ನೂರ್, ಚಾಮರಾಜ ನಗರ
—–

Leave a Reply

Your email address will not be published. Required fields are marked *