ಅನುದಿನ ಕವನ-೧೩೧೭, ಕವಯಿತ್ರಿ: ಲತಾ.ಎಲ್.ಜವಳಿ, ಹೊಸಪೇಟೆ, ಕವನದ ಶೀರ್ಷಿಕೆ: ಅವ್ವ ಮತ್ತು ರೊಟ್ಟಿ, [ಗುಬ್ಬಿಗಳ ಚಿತ್ರ: ಸಿದ್ಧರಾಮ ಕೂಡ್ಲಿಗಿ]

ಅವ್ವ ಮತ್ತು ರೊಟ್ಟಿ


ಇಂದೇಕೋ
ಹೆಂಚು ಕ್ಷುದ್ರವಾಗಿದೆ
ಹದವಾಗಿ ಬೇಯಬೇಕಿದ್ದ ರೊಟ್ಟಿ
ಸುಟ್ಟು ಕರಕಲಾಗುತ್ತಿದೆ
ನಿಗಿ ನಿಗಿ ಕೆಂಡವೂ ಮತ್ತಷ್ಟು ಕೆಂಪೇರುವಂತೆ
ಬದಲಾಗುತ್ತಿದೆ
ಅವ್ವನ ಸುಪ್ತ ನಿರೀಕ್ಷೆಯಂತೆ.


ಇಂದೇಕೋ
ಹೆಂಚು ಗುನುಗುಡುತ್ತಿದೆ
ಶೃತಿ ಲಯ ತಾಳಗಳ ಗುಂಗಿನಲಿ
ರೊಟ್ಟಿ ಮಲ್ಲಿಗೆಯಂತೆ ಅರಳುತ್ತಿದೆ
ಸುಹಾಸನೆಯೊಂದೆ ಇಲ್ಲ
ಅದಿರುವುದು
ಅವ್ವನ ತುಂಟ ಮನಸ್ಸಿನಲ್ಲಿ.


ಇಂದೇಕೋ
ಹೆಂಚು ನಿಡುಸುಯ್ಯುತ್ತಿದೆ
ಹದವಾಗಿ ಬೆಂದ ರೊಟ್ಟಿಯನ್ನು ಬಿಡದೆ
ಕಾವು ನೋಯಿಸುತ್ತಿದೆ
ಬೆವರಿನ ದುಂಡನೆ ಹನಿಗಳು
ಒಡೆದು ಚೂರಾಗುತ್ತಿವೆ
ಅವ್ವನ ನೊಂದ ಮನಸ್ಸಿನಂತೆ.


ಇಂದೇಕೋ
ಹೆಂಚು ಮೌನ ತಳೆದಿದೆ
ಅರೆ ಬೆಂದ ರೊಟ್ಟಿ ನಗುವುದನ್ನು ಮರೆತು
ಮಲಗಿದೆ
ಒಲೆಯೊಳಗಿನ ಬೆಂಕಿಗೂ ಚಳಿಯಾಗುವಂತೆ
ಅನ್ಯ ಮನಸ್ಕಳಾಗಿದೆ
ಅವ್ವನ ಮುಗ್ಧ ಮನಸ್ಸಿನಂತೆ


ಇಂದೇಕೋ
ಹೆಂಚು ಲಾಲಿ ಹಾಡುತ್ತಿದೆ
ಬೇಯಬೇಕಿರುವ ರೊಟ್ಟಿಯನ್ನು ತಬ್ಬಿ ಮೈಮರೆತಿದೆ
ಪರಕಾಯ ಪ್ರವೇಶದಂತೆ
ಜೋಗುಳದಲ್ಲಿನ ಮಮತೆಗೆ
ಕೆಂಡವೂ ತಣಿದು
ತನ್ಮಯಳಾಗಿದೆ
ಅವ್ವನ ಹೃದಯ ಸಾಗರದಂತೆ.

-ಲತಾ.ಎಲ್.ಜವಳಿ, ಹೊಸಪೇಟೆ
—–

Leave a Reply

Your email address will not be published. Required fields are marked *