ಕೆಪಿಎಸ್ ಸಿ ಪರೀಕ್ಷೆ: ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸ್ಪಷ್ಟನೆ

ಬಳ್ಳಾರಿ, ಆ. 27:  ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕೆಪಿಎಸ್ ಸಿ ಸ್ಪರ್ಧಾತ್ಮಕ ಪರೀಕ್ಷೆ ಸುಗಮವಾಗಿ ಜರುಗಿದ್ದು, ಯಾವುದೇ ರೀತಿಯ ಅಕ್ರಮ ಚಟುವಟಿಕೆ ನಡೆದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಸ್ಪಷ್ಟಪಡಿಸಿದ್ದಾರೆ.                                               ನಗರದ ಸೇಂಟ್ ಜಾನ್ಸ್ ಪರೀಕ್ಷಾ ಕೇಂದ್ರದ ಕೊಠಡಿಯೊಂದರಲ್ಲಿ ಅಭ್ಯರ್ಥಿಗಳಿಗೆ ವಿತರಿಸಿದ ಪ್ರಶ್ನೆ ಪತ್ರಿಕೆಯ ಕವರ್ ಸಮರ್ಪಕ ಸೀಲ್ ಸ್ಥಿತಿಯಲ್ಲಿಯೇ ಬಂದಿದ್ದು ಇದನ್ನು ಡಿವೈಎಸ್ ಪಿ ಹಾಗೂ ತಹಸಿಲ್ದಾರರು ಪರೀಕ್ಷಾ ಕೇಂದ್ರಕ್ಕೆ ಖುದ್ದು ಭೇಟಿ ನೀಡಿ ಖಚಿತಪಡಿಸಿಕೊಂಡಿರುತ್ತಾರೆ. ಕೆಲವು ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆಯ ಕವರ್ ಪತ್ರಿಕೆ ವಿತರಣೆಗೂ ಮುನ್ನವೇ ಓಪನ್ ಇತ್ತು, ಸೀಲ್ ಆಗಿರಲಿಲ್ಲ ಎಂಬುದಾಗಿ ಸುಖಾಸುಮ್ಮನೆ ಅನುಮಾನಿಸಿ ಆಧಾರ ರಹಿತ ಆರೋಪ ಮಾಡಿದ್ದಾರೆ. ಈ‌ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಪರೀಕ್ಷೆ ಸುಗಮವಾಗಿ ಯಾವುದೇ ಗೊಂದಲಗಳಿಲ್ಲದೆ, ಕ್ರಮಬದ್ಧವಾಗಿಯೇ ಜರುಗಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.                                            ಯಾರೂ ಕೂಡ ಗೊಂದಲಕ್ಕೆ ಒಳಗಾಗಬಾರದು ಹಾಗೂ ಸುಳ್ಳು ವದಂತಿಗಳನ್ನು ನಂಬಬಾರದು ಎಂದು ಜಿಲ್ಲಾಧಿಕಾರಿಗಳು ಮನವಿ‌ ಮಾಡಿದ್ದಾರೆ.

Leave a Reply

Your email address will not be published. Required fields are marked *