ಅನುದಿನ ಕವನ-೧೩೭೯, ಕವಯಿತ್ರಿ: ಪ್ರತಿಭಾ ಪಾಟೀಲ್, ಧಾರವಾಡ, ಕವನದ ಶೀರ್ಷಿಕೆ: ಇಳೆಯ ಯಾತ್ರೆ

ಇಳೆಯ ಯಾತ್ರೆ

ಹಸಿರೆಲೆಗಳ ಟೊಂಗೆಯಲಿ
ರಸ ತುಂಬಿದ ಹಣ್ಣಿನ ಜಾತ್ರೆ
ಮೂಡಣದಿ ರವಿ ನಗಲು
ಶುರುವಾಗುವದು ಇಳೆಯ ಯಾತ್ರೆ

ಹಕ್ಕಿಯ ಚಿಲಿಪಿಲಿ ರಾಗಕ್ಕೆ ಮನಸೋತು
ಇಳೆಯು ಸುರಿದಿದೆ ಆನಂದ ಭಾಷ್ಪ
ಇಬ್ಬನಿಯಾಗಿ ಮಬ್ಬಲಿ ತೇಲಿ
ತಬ್ಬಿಕೊಂಡಿಹುದು ನಾಚುತಲೆ ಪುಷ್ಪ

ಕಬ್ಬಕ್ಕಿಗಳ ಹಿಂಡು ಕೊಬ್ಬಿಕೊಂಡು
ಕಬ್ಬಿಗರ ಊರಿನತ್ತ ಹಾರಿ ಹೋಗಿವೆ
ಕೆಂಪು ಮೂಗಿನ ಗಿಳಿವಿಂಡು
ರಂಗಿನ ರಂಗೋಲಿಯ ಮೇಲೆ ಸಾಗಿ ಬಂದಿವೆ

ಝುಳು ಝುಳು ಜಲಧಾರೆಯ ತುದಿಯಲಿ
ಝೇಂಕರಿಸುತಿದೆ ಜೇನು ಗೂಡು
ಕೇಳುತಿಹುದು ಹೊಲದ ನಡುವಿನಲಿ
ನಾಟಿ ಮಾಡುತಿಹ ರೈತನ ಹಾಡು

ಏನು ಕಲರವ ಈ ಕಿವಿಗಳಿಗೆ
ಧನ್ಯತೆಯ ಅನುಭವವು
ಹೂವಿನದಳದಲಿ ಬಿದ್ದ ಇಬ್ಬನಿಯಲಿ
ಮಿಂದೆದ್ದ ಮಧುರ ಆನಂದವು

ಪ್ರಕೃತಿಯ ಜೀವರಾಶಿಗಳೆಲ್ಲವೂ ನಿತ್ಯ
ಕಾಯಕದಲ್ಲಿ ಮುಳುಗಿದವು ಮತ್ತೊಂದು ದಿನ
ಈ ಕವಿಯ ಕುಂಚದಲ್ಲಿ ಉಳಿದು
ಸೇರಿಕೊಂಡು ಆಯಿತು ಮತ್ತೊಂದು ಕವನ

-ಪ್ರತಿಭಾ ಪಾಟೀಲ್, ಧಾರವಾಡ
—–

Leave a Reply

Your email address will not be published. Required fields are marked *