ಅನುದಿನ ಕವನ-೧೪೯೧, ಚಿತ್ರ ಮತ್ತು ಕವನ:ತಮ್ಮಣ್ಣ ಬೀಗಾರ, ಸಿದ್ದಾಪುರ, ಉತ್ತರ‌ಕನ್ನಡ, ಕವನದ ಶೀರ್ಷಿಕೆ: ಮಗುವಾಗಿ ಬಿಟ್ಟ

ಮಗುವಾಗಿ ಬಿಟ್ಟ

ಗಾಂಧಿ ಅಜ್ಜನ ಫೋಟೋ ಅಲ್ಲಿ
ಇಟ್ಟಿದ್ರಪ್ಪ ಹಾಗೆ
ಹೂಗಳ ಮಾಲೆ ಎಲ್ಲ ತಂದು
ತುಂಬಿದ್ರಪ್ಪ ಹೀಗೆ

ಹಣ್ಣು ಬೆಲ್ಲ ಇಟ್ಟಿದ್ರಲ್ಲಿ
ಘಮ ಘಮ ಕಡ್ಡಿಯ ಕಂಪು
ಪುಟ್ಟ ಹಾಗೇ ನೋಡ್ತಾ ಇದ್ದ
ಹತ್ತಿತು ಅವನಿಗೆ ಜೊಂಪು

ಹಣ್ಣು ಹೂವು ಯಾವುದು ಮುಟ್ಟದೆ
ಗಾಂಧಿ ತಾತ ಬಂದ
ಪುಟ್ಟನ ಹತ್ತಿರ ಏನೋ ಹೇಳುತ
ಬಾರೋ ಜೊತೆಯಲಿ ಎಂದ

ತಾತನ ನಡಿಗೆ ಎಷ್ಟು ಜೋರು
ಪುಟ್ಟುಗೆ ಓಡುವ ಆಟ
ಅನಾತ ಅಜ್ಜಿಯ ಜೋಪಡಿ ಹೊಕ್ಕು
ಕುಡಿದನು ನೀರಿನ ಲೋಟ

ಅಲ್ಲಿಂದಿಲ್ಲಿಗು ಕೇಳುತ ಬಂದ
ಗಿಡಗಳ ಬೆಳೆಸಿಲ್ಲೇನು
ಹೀಗೇ ಗಿಡಗಳ ಕಡಿಯುತ ಉಳಿದರೆ
ನರಕವ ಕಟ್ಟುವ ಪ್ಲಾನು

ತಟ್ಟನೆ ಪುಟ್ಟುವ ನಿಲ್ಲಿಸಿ ಗಾಂಧಿ
ಹೊರಟೇ ಬಿಟ್ಟ ಅತ್ತ
ಕೆಸರಲಿ ಬಿದ್ದ ನಾಯಿಯ ಎತ್ತಿ
ಬಿಸ್ಕಿಟ ಎರಡು ಇತ್ತ

ಅಯ್ಯೋ ಅಯ್ಯೋ ಎಷ್ಟು ಹೊಲಸು
ಕಸದ ಗುಂಡಿ ರಸ್ತೆ
ಕಸವನು ಹೆರಕಲು ಹೊರಟೇ ಬಿಟ್ಟ
ಪುಟ್ಟನ ನಿಲ್ಲಿಸಿ ಮತ್ತೆ

ಶಾಲೆಯ ವರೆಗೂ ಬಂದಿದ್ದಾಯ್ತು
ಹೋದ ಎಲ್ಲಿ ಈತ
ಮಕ್ಕಳು ನೆಟ್ಟ ಗಿಡಗಳ ಮಧ್ಯ
ಬಿಳಿಯ ಉಡುಗೆಯ ತಾತ

ಮಕ್ಕಳ ಪ್ರೀತಿಯ ಗುರುಗಳು ಬಂದ್ರು
ಮಕ್ಕಳೇ ಅವರ ನೀತಿ
ತಾತನೂ ಈಗ ಮಗುವಾಗಿ ಬಿಟ್ಟ
ಅವನಿಗೂ ಅದುವೇ ಪ್ರೀತಿ.

-ತಮ್ಮಣ್ಣ ಬೀಗಾರ, ಸಿದ್ದಾಪುರ, ಉತ್ತರ‌ಕನ್ನಡ
—–

Leave a Reply

Your email address will not be published. Required fields are marked *