ಅನುದಿನ ಕವನ-೧೫೪೧, ಕವಯಿತ್ರಿ: ಲಾವಣ್ಯಪ್ರಭ, ಮೈಸೂರು, ಕವನದ ಶೀರ್ಷಿಕೆ: ನನ್ನ ನಿನ್ನ ನಡುವೆ

ವಿಶ್ವ ಕಾವ್ಯ ದಿನದ ಶುಭಾಶಯಗಳು

ನನ್ನ ನಿನ್ನ ನಡುವೆ

ನೀನಿದ್ದೀಯೆ ನಾನೂ ಇದ್ದೇನೆ
ದಡದ ಎರಡೂ ಬದಿಯಲ್ಲಿ
ನಾವಿಲ್ಲ
ನಡುವೆ ಹರಿವ ನದಿಯೂ ಇಲ್ಲ
ಸೇತುವೆ ಕಟ್ಟುವುದು ಕಷ್ಟಸಾಧ್ಯ.

ನೀನಿದ್ದೀಯೆ ನಾನೂ ಇದ್ದೇನೆ
ಭೂಮಿ ಆಕಾಶಗಳ ಅಂತರದಲ್ಲಿ
ನಾವಿಲ್ಲ
ನಡುವೆ ತೇಲುವ ಬಿಳಿಮುಗಿಲೂ ಇಲ್ಲ
ಬೆಳ್ಳಕ್ಕಿ ಹಾರಿ ಬಿಡುವ ಮಾತೆಲ್ಲಿ?

ಎಷ್ಟು ಹತ್ತಿರದಲ್ಲಿ ಬಯಲಾಗಿದ್ದೇವೆ
ನಾವು!
ನಡುವೆ ಸುನಾಮಿ, ಭೂಕಂಪ, ಲಾವಾ,
ಪ್ರಕೃತಿ ವಿಕೋಪ
ಮಿಕ್ಕಂತೆ ಮುಖವಾಡಗಳ ಹಿಂದೆ
ಗನ್ನು ಬಾಂಬುಗಳ ಧೂಮಧೂಪ.

ನೀನೂ ಇದ್ದೀಯೆ ನಾನೂ ಇದ್ದೇನೆ
ನಡುವೆ ಸೇತುವೆ ಸಾಧುವೇ?
ಹಕ್ಕಿ ರೆಕ್ಕೆ ಬಿಚ್ಚೀತೇ?


-ಲಾವಣ್ಯ ಪ್ರಭಾ, ಮೈಸೂರು
——

Leave a Reply

Your email address will not be published. Required fields are marked *