ಅನುದಿನ‌ ಕವನ-೧೫೮೧, ಕವಿ: ಶಂಕರ ಎನ್ ಕೆಂಚನೂರು, ಕುಂದಾಪುರ

ನೀನು ಹೋಗುವ ಮೊದಲು
ನಕ್ಷತ್ರಗಳ ಕತೆ ಹೇಳಿದ್ದೆ

ಅವು ಸುಟ್ಟು ಹೋದ ನಂತರವೂ
ತಮ್ಮೊಳಗೆ ಬೆಳಕನ್ನು ಕಾಪಾಡಿಕೊಳ್ಳುವ ಬಗ್ಗೆ

ಚಂದ್ರನಿಲ್ಲದ ರಾತ್ರಿಯಲ್ಲಿಯೂ
ಬಾನನ್ನು ಆಕ್ರಮಿಸುವ ಕುರಿತು
ಅವು ಯೋಚಿಸುವುದಿಲ್ಲ ಎಂದಿದ್ದೆ

ಈಗ
ನೀನು ಹೋದ ನಂತರವೂ
ನಿನ್ನ ಪ್ರೇಮವನ್ನು ಕಾಪಿಟ್ಟುಕೊಂಡಿದ್ದೇನೆ
ನೀನಿಲ್ಲದ ಖಾಲಿತನವನ್ನು
ಇನ್ನೂ ಹಾಗೇ ಉಳಿಸಿಕೊಂಡಿದ್ದೇನೆ

ನೀನು
ಈಗ ಇನ್ನೊಮ್ಮೆ
ಬಂದು ಹೋಗು

ಇದೀಗ ಮತ್ತೆ
ನಕ್ಷತ್ರಗಳು ಇಲ್ಲದ ಇರುಳು
ಚಂದ್ರನ ಕತೆ ಹೇಳು

ಚಂದ್ರ ನಕ್ಷತ್ರಗಳ
ಅನುಪಸ್ಥಿತಿಯಲ್ಲಿ
ಅವುಗಳ ಪಾಲಿನ ಆಕಾಶವನ್ನು
ಅವುಗಳ ಪಾಲಿಗೆಂದು ಇಟ್ಟಿದ್ದನೇ?


-ಶಂಕರ‌ ಎನ್‌ ಕೆಂಚನೂರು, ಕುಂದಾಪುರ

Leave a Reply

Your email address will not be published. Required fields are marked *