ಅನುದಿನ ಕವನ-೧೬೨೫, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ

ಆ ತಂಗಾಳಿಯು ನನ್ನ ಮೌನಕ್ಕೆ
ಬಿರುಗಾಳಿ ರಾಚಿದಂತಿದೆ
ಕೋಪ ಮುನಿಸು ಎಲ್ಲವು ಸೊರಗಿ
ದಿಕ್ಕೆಟ್ಟು ನಿಂತವಳಿಗೆ ದಾರಿ ಬರಿದಾಗಿದೆ…

ಯಾವ ಊಹೆಗೂ ನಿಲುಕದ
ಪ್ರೇಮ ಪ್ರಕರಣ ನನ್ನದು
ಅಪರಾಧಿ ನಾನೋ
ಇಲ್ಲ….!ನೀನೋ ಗೊತ್ತಿಲ್ಲ
ಅಂತೂ…!ಪ್ರೀತಿ ಎಂದರೆ
ಯಾವುದೇ ತನಿಖೆಗಳಿಲ್ಲದ ಮೊಕದ್ದಮೆ…

ಅಂತೂ ಮತ್ತೆ ನಿನ್ನ ಹಾಜರಿ
ಇಲ್ಲವೇನೋ ಅನಿಸುವಷ್ಟು
ಒಂಟಿ ಯಾತನೆ ಎಂಬುದು-
ನನಗೀಗ ಸಿಕ್ಕ ನಿನ್ನ ಪ್ರೀತಿಯ ಉಡುಗೊರೆ
ಸದ್ಯ ಈಗಾ ಅದು ಸಾಬೀತಾಗಿದೆ…

ಅಯ್ಯೋ…! ನಾನೀಗ
ನಿನ್ನದೆ ಗುಂಗಿಗೆ ಸಿಕ್ಕಿ
ಎತ್ತೆತ್ತಲೋ ಹಾರುತ್ತಿರುವ
ದಿಕ್ಕಿಲ್ಲದ ಗಾಳಿಪಟ….


-ಸಿದ್ದು ಜನ್ನೂರ್, ಚಾಮರಾಜನಗರ
—–