ಅನುದಿನ ಕವನ-೧೬೪೨, ಕವಿ: ಟಿ.ಪಿ. ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ: ಒಲವೇ ನೀನಿರಲು

ಒಲವೇ ನೀನಿರಲು

ನೀನಿರಲು ಬಳಲಿಕೆ ಬೇಸರ ದುಗುಡಗಳಿನ್ನಿಲ್ಲ;
ಎಲ್ಲಾ ಸಂತಸ ಉಲ್ಲಾಸದ ಘಳಿಗೆಗಳೆ!
ನೀನಿರಲು ಚಿಂತೆಯ ಅಂತೆ ಕಂತೆಗಳು ಇನ್ನಿಲ್ಲ;
ಎಲ್ಲಾ ರಂಗು ರಂಗಿನ ಸಮರಸ ಕ್ಷಣಗಳೆ!

ನೀನಿರಲು ನಡಿಗೆಯ ಪ್ರತಿ ಹೆಜ್ಜೆಯು ಸರಿಗಮ;
ಹಿಂದು ಮುಂದಾಗದೆಂದು ಬಾಳ ನೌಕೆ!
ನೀನಿರಲು ನುಡಿಯೆಲ್ಲ ಅನುರಾಗದ ಸಂಭ್ರಮ;
ಕುಂದಿರದ ಉತ್ಸಾಹ ಜೀವದೀ ಆತ್ಮಕ್ಕೆ!

ನೀನಿರಲು ಸೋಲು ಹಿಂಜರಿಕೆಗಳ ಭಯವಿಲ್ಲ;
ಗೆಲುವಿನ ನಡಿಗೆಯೆ ನಿನ್ನ ಇಶಾರೆಯಲ್ಲಿ!
ನೀನಿರಲು ದ್ವೇಷ ಮತ್ಸರಗಳ ಉಪಟಳಗಳಿಲ್ಲ;
ನಿಷ್ಕಾಮ ಪ್ರೇಮ ನಿನ್ನ ಕಣ್ಣಾಸರೆಯಲ್ಲಿ!

ನೀನಿರಲು ಆಸೆ ನಿರಾಸೆಗಳ ಶೂಲ ಪಾಶಗಳಿಲ್ಲ;
ಭವದ ಬಂಧನಗಳ ಬಿಡುಗಡೆ ಇನ್ನಷ್ಟೆ!
ನೀನಿರಲು ರಾಗ ವೇಗಾವೇಗಗಳ ಜಂಜಡಗಳಿಲ್ಲ;
ಸುಶೀಲ ಸಂಪನ್ನ ಸಂತುಷ್ಟ ಪರಾಕಾಷ್ಟೆ!

ನೀನಿರಲು ಜ್ಞಾನ ವಿಜ್ಞಾನ ರೀತಿ ನೀತಿ ನಿಯಮ;
ವ್ಯಕ್ತ ಅವ್ಯಕ್ತಗಳ ಭಾವ ನಿರ್ಭಾವ ಸಿದ್ಧಿ!
ನೀನಿರಲು ಶಕ್ತಿ ಮುಕ್ತಿ ಧರ್ಮ ಕರ್ಮ ಆಯಾಮ;
ಸುಪ್ತ ನಿರ್ಲಿಪ್ತ ನಿರ್ಮೋಹ ತೇಜ ಬುದ್ಧಿ!


-ಟಿ.ಪಿ.ಉಮೇಶ್, ಹೊಳಲ್ಕೆರೆ