ಅನುದಿನ ಕವನ-೧೭೩೬, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ.

🙏ವಿಜಯದಶಮಿಯ ಶುಭಾಶಯಗಳು🙏🏻

ಪ್ರೀತಿ ಮಮತೆ ಮುಕ್ಕಿ
ಕರಣೆ ಕಕ್ಕುಲತೆ ಕುಕ್ಕಿ
ಬಾಂಧವ್ಯ ಭಾವ ಬಸಿದು
ದ್ವೇಷ ಹೊಸೆವ ನಮ್ಮಲ್ಲಿ
ಪ್ರೀತಿ ವಿಜಯವಾಗಲಿ
ದಯೆ ದಶಮಿಯಾಗಲಿ

ನೀತಿ ನೇಮವ ಜಾರಿಸಿ,
ಕೋಮು ಗಲಭೆ ಗರ್ಜಿಸಿ
ಧರ್ಮದ ದಾರಿ ತಪ್ಪಿಸಿ
ಕರ್ಮ ಕಾರುವ ನಮ್ಮಲ್ಲಿ
ವಿಶ್ವಾಸ ವಿಜಯವಾಗಲಿ
ಧರ್ಮ ದಶಮಿಯಾಗಲಿ

ಸತ್ಯ ಸುಮಗಳ ಕಿತ್ತು
ಮಿತ್ಯ ಮುಳ್ಳುಗಳ ಬಿತ್ತಿ
ಸಂಸ್ಕೃತಿ ಮುಳುಗಿಸಿ
ವಿಕೃತಿ ತೇಲಿಸುವ ನಮ್ಮಲ್ಲಿ
ಪ್ರಕೃತಿ ವಿಜಯವಾಗಲಿ
ಸಂಸ್ಕೃತಿ ದಶಮಿಯಾಗಲಿ

ಭವ್ಯ ಮಾನವರಾಗಿ
ವಿಶ್ವಮಾನವರೇ ನಾವಾಗಿ
ವಿಶಾಲ ಬಾನುವಾಗಿ
ಸಹಿಷ್ಣತೆಯ ಧಾತ್ರಿಯಾದರೆ
ಪ್ರೀತಿ ವಿಜಯವಾಗಿ
ಪ್ರೇಮ ದಶಮಿಯಾಗುವುದು‌.

-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.

Leave a Reply

Your email address will not be published. Required fields are marked *