
ಬಳ್ಳಾರಿ, ಫೆ.23: ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ಗುತ್ತಿಗೆದಾರರಿಗೆ ಉಳಿಸಿಕೊಂಡ ಬಾಕಿ ಹಣ ರೂ.37,000 ಕೋಟಿ ರೂಪಾಯಿಗಳನ್ನು ತಕ್ಷಣ ಬಿಡುಗಡೆ ಮಾಡದಿದ್ದಲ್ಲಿ ಗುತ್ತಿಗೆದಾರರಿಂದ ಮಾ. 6 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯದ ಎಲ್ಲಾ ಗುತ್ತಿಗೆದಾರರಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್ ಮಂಜುನಾಥ್ ತಿಳಿಸಿದರು.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಗುತ್ತಿಗೆದಾರರು ತಮ್ಮ ಹೊಲ ಮನೆ ಆಸ್ತಿಗಳನ್ನು ಅಡವಿಟ್ಟು ಸಾಲ ಸೋಲ ಮಾಡಿ ಪಿಡಬ್ಲ್ಯೂಡಿ, ಆರ್ ಡಿ ಪಿ ಆರ್, ಜಲಸಂಪನ್ಮೂಲ ಸೇರಿದಂತೆ ಐದಾರು ಇಲಾಖೆಯ ಕೆಲಸಗಳನ್ನು ಮಾಡಿಕೊಟ್ಟಿದ್ದೇವೆ. ಆದರೆ ನಮಗೆ ಗುತ್ತಿಗೆ ಹಣವನ್ನು ಬಿಡುಗಡೆ ಮಾಡದೇ ಹಿಂದಿನ ಸರ್ಕಾರ ಮುಂದಿನ ಸರ್ಕಾರ ಎಂದು ಸಬೂಬುಗಳನ್ನು ಹೇಳುತ್ತಾ ಮುಂದೂಡುತ್ತಿದೆ ಇದರಿಂದ ನಮಗೆ ತುಂಬಾ ಆರ್ಥಿಕ ನಷ್ಟ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾವು ಕೆಲಸ ಮಾಡಿದ ಪಿಡಬ್ಲ್ಯೂಡಿ ಇಲಾಖೆಯ 8370, ಆರ್ ಡಿ ಪಿ ಆರ್ 3800, ಜಲಸಂಪನ್ಮೂಲ ಇಲಾಖೆಯ 13000, ಸಣ್ಣ ನೀರಾವರಿ ಇಲಾಖೆಯ 3000, ನಗರಾಭಿವೃದ್ಧಿ ಇಲಾಖೆಯ 2000 ವಸತಿ 2006, ಕಾರ್ಮಿಕ ಇಲಾಖೆಯ 2000 ಕೋಟಿ ಬಿಬಿಎಂಪಿ 2600 ಕೋಟಿ ಒಟ್ಟು 37,000 ಕೋಟಿ ಬಾಕಿ ಹಣವನ್ನು ಕೂಡಲೇ ಸರ್ಕಾರ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 100 ಪುಟಗಳ ಮನವಿ ಪತ್ರವನ್ನು ಸಲ್ಲಿಸಿದ್ದೇವೆ ಆದರೂ ಸಹ ಸರ್ಕಾರ ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದರು.
ನಮ್ಮ ಗುತ್ತಿಗೆ ಹಣ ಬಾಕಿ ಉಳಿಸಿಕೊಂಡು ಹತ್ತು ಜಿಲ್ಲೆಗಳ ಒಟ್ಟುಗೂಡಿಸಿ ಪ್ಯಾಕೇಜ್ ಆಗಿ ಹೊರ ರಾಜ್ಯದವರಿಗೆ ಗುತ್ತಿಗೆಯನ್ನು ನೀಡಲಾಗುತ್ತದೆ ಅವರು ನೀಡುವ ಉಪಗುತ್ತಿಗೆಯಿಂದ ನಾವು ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ ಕೂಡಲೇ ಸರ್ಕಾರ ನಮ್ಮ ಬಾಕಿ ಹಣವನ್ನು ಬಿಡುಗಡೆ ಮಾಡಿ ಕಾಮಗಾರಿಗಳನ್ನು ನೇರವಾಗಿ ನಮಗೆ ಗುತ್ತಿಗೆ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ನಮ್ಮ ಸಂಘದ 67 ಜನ ನಿರ್ದೇಶಕರು ಮತ್ತು ಎಲ್ಲಾ ಜಿಲ್ಲೆಯ ಜಿಲ್ಲಾಧ್ಯಕ್ಷರು ಸಭೆ ಸೇರಿ ಒಂದು ದಿನ ಕಾಮಗಾರಿಯನ್ನು ನಿಲ್ಲಿಸಿ ಸಾಂಕೇತಿಕವಾಗಿ ಧರಣಿ ನಡೆಸಲಾಗುವುದು ನಂತರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯದ ಎಲ್ಲಾ ಗುತ್ತಿಗೆದಾರರು ಸೇರಿ ಪ್ರತಿಭಟನೆಯನ್ನು ನಡೆಸಲಾಗುವುದು ಅಷ್ಟರೊಳಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಬಂದು ನಮ್ಮ ಜೊತೆ ಮಾತನಾಡಿದಲ್ಲಿ ನಾವು ಪ್ರತಿಭಟನೆಯನ್ನು ಕೈ ಬಿಡಲು ಸಿದ್ದರಿದ್ದೇವೆ ಎಂದರು.
ನಮ್ಮ ಹೋರಾಟ ಅಥವಾ ಪ್ರತಿಭಟನೆ ಸರ್ಕಾರದೊಂದಿಗೆ ಸಂಘರ್ಷವಲ್ಲ ನಮ್ಮ ಹಣಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ ನಮ್ಮ ಸಮಸ್ಯೆಯನ್ನು ಸಿಎಂ ಗಮನಕ್ಕೆ ತಂದರು ಅವರು ಹಾರಿಕೆ ರೀತಿಯಲ್ಲಿ ಮಾತನಾಡಿ ಸಾಗ ಹಾಕುತ್ತಾರೆ ಇದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಹದಗೆಟ್ಟು ನಮ್ಮ ಕುಟುಂಬಗಳು ಬೀದಿಗೆ ಬೀಳುವ ಸಾಧ್ಯತೆ ಇದೆ. ಕಾರಣ ಸರ್ಕಾರ ಕೂಡಲೇ ನಮ್ಮ ಬಾಕಿ ಹಣವನ್ನು ಬಿಡುಗಡೆಗೊಳಿಸಬೇಕೆಂದು ಆರ್ ಮಂಜುನಾಥ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಳ್ಳಾರಿ ಜಿಲ್ಲಾ ಅಧ್ಯಕ್ಷ ರಮಣ ರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಉಮಾಶಂಕರ್ ರೆಡ್ಡಿ, ನಾಗಪ್ಪ ನಾಗರಾಜ್ ರಾಜಶೇಖರ್, ಪ್ರದೀಪ್, ಸಿದ್ದೇಶ್ ಸೇರಿದಂತೆ ಇತರರಿದ್ದರು.
