
ಹೊಸಪೇಟೆ, ಜೂ.26: ತಾಲೂಕಿನ ಮರಿಯಮ್ಮನಹಳ್ಳಿ ಗ್ರಾಮದ ಹಿರಿಯ ರಂಗ ಕಲಾವಿದೆ ಸಿ. ಗಂಗಮ್ಮ ಅವರು ಗುರುವಾರ ತಡರಾತ್ರಿ ನಿಧನರಾಗಿದ್ದಾರೆ.
ಅವರಿಗೆ 80ವರ್ಷ ವಯಸ್ಸಾಗಿತ್ತು. ಪುತ್ರ ಸಿ. ಸುರೇಶ, ಪುತ್ರಿ ಅಧ್ಯಾಪಕಿ ಸಿ. ಉಮಾ, ಹಿರಿಯ ಸೊಸೆ ಮುಖ್ಯೋಪಾಧ್ಯಾಯಿನಿ ಬಸಮ್ಮ ಸಿ.ವಿಶ್ವನಾಥ್, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಗಂಗಮ್ಮ ಅವರಿಗೆ ಗುರುವಾರ ರಾತ್ರಿ ತೀವ್ರವಾಗಿ ಅನಾರೋಗ್ಯ ಕಾಡಿದ್ದರಿಂದ ಕುಟುಂಬದ ಸದಸ್ಯರು ಅಂಬ್ಯಲೆನ್ಸ್ ಮೂಲಕ ಹೊಸಪೇಟೆ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರೆಂದು ಕುಟುಂಬದ ಸದಸ್ಯರು ತಿಳಿಸಿದರು.
ಶುಕ್ರವಾರ ಸಂಜೆ 4ಗಂಟೆಗೆ ಮರಿಯಮ್ಮನಹಳ್ಳಿ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರಂಗ ಗೌರವ: ಎಪ್ಪತ್ತರ ದಶಕದಲ್ಲಿ ರಂಗಭೂಮಿಗೆ ಸಲ್ಲಿಸಿರುವ ಅನುಪಮ ಸೇವೆಯನ್ನು ಗಮನಿಸಿ ಗಂಗಮ್ಮ ಅವರನ್ನು ಕಳೆದ ವರ್ಷ ಮರಿಯಮ್ಮನಹಳ್ಳಿ ಲಲಿತಾ ಕಲಾ ರಂಗ ಸನ್ಮಾನಿಸಿ ಗೌರವಿಸಿತ್ತು.
ಕಂಬನಿ: ಹಿರಿಯ ರಂಗ ಕಲಾವಿದೆ ಸಿ. ಗಂಗಮ್ಮ ಅವರ ನಿಧನಕ್ಕೆ ಲಲಿತಾ ಕಲಾ ರಂಗ ಮತ್ತು ಬಳ್ಳಾರಿಯ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಕಂಬನಿ ಮಿಡಿದಿವೆ.
