ಅನುದಿನ ಕವನ-೧೯೨೨, ಕವಯತ್ರಿ: ಸಮುದ್ಯತಾ ಕಂಜರ್ಪಣೆ, ಬೆಂಗಳೂರು

ಬ್ರೆಡ್ಡಿಗೆ ಸವರಿ ಉಳಿದ ಬೆಣ್ಣೆಯನ್ನು
ಚಾಕುವಿನಿಂದ ನೇರವಾಗಿ
ನಾಲಿಗೆಗೆ ತಾಕಿಸಿ ಸೆಳೆಯುವುದು
ಅವಳಿಗೆ ಅಭ್ಯಾಸ..
ಯಾವತ್ತೂ ಯಾವ ಚಾಕುವೂ ಅವಳ
ಸೀಳುವ ಧೈರ್ಯ ತೋರಿಲ್ಲ
ಎನ್ನುವುದೂ ನಿಜ.

ಅವಳು ಇಡೀ ಬದುಕನ್ನು
ಹನಿಹನಿಯಾಗಿ ಬದುಕಿದ್ದೂ ಹೀಗೆ.
ಬದುಕಿನ ಅಸೂಯೆ, ಪೊಸೆಸಿವ್ ನೆಸ್,
ಪ್ರೀತಿ, ಹಿಂಸೆ, ಎಲ್ಲವನ್ನೂ
ನವಿರಾಗಿ ಚುಚ್ಚಿ ಅದಕ್ಕೊಂದಿಷ್ಟು
ಕಿರಿಕಿರಿ ಉಂಟು ಮಾಡುತ್ತಾಳೆ.

ಆಗಾಗ ಬೆಂಕಿಕಡ್ಡಿ ಗೀರಿ ಉರಿಯುವವರೆಗೂ
ಬೆರಳಲ್ಲಿ ಹಿಡಿದು ನೋಡುತ್ತಾಳೆ.
ಇನ್ನೇನು ಸುಟ್ಟುಬಿಡುವ ಹೊತ್ತಲ್ಲಿ
ಅಷ್ಟು ಹೊತ್ತು ಉರಿದ ಕಡ್ಡಿಗೂ,
ಒಂದು ಘನತೆಯ ವಿದಾಯ ಕೋರುವಂತೆ
ನಿಧಾನವಾಗಿ, ಎಸೆಯದೇ ಕೆಳಗಿಡುತ್ತಾಳೆ.

ಮಂಚದ ಕಾಲಿಗೋ, ಗೋಡೆಯಂಚಿಗೋ
ಕಿರುಬೆರಳು ಹೊಡೆಸಿಕೊಳ್ಳುವಷ್ಟೇ
ಸಲೀಸಾಗಿ ಆಗಾಗ ವಾಸ್ತವ
ಅಪ್ಪಳಿಸುತ್ತದೆ. ಒಂದಷ್ಟು ಹೊತ್ತು
ನೋವಿಗೆ ನಲುಗಿ ಕೂರುವವಳು
ಮತ್ತೆ ಎದ್ದು ನಿಲ್ಲುತ್ತಾಳೆ..

ಬದುಕನ್ನು ಟೀಸ್ ಮಾಡುವ ಕಲೆ
ತುಂಬ ಮೊದಲೇ ಕಲಿತುಬಿಟ್ಟಿದ್ದಾಳೆ.
ನಿನಗಿಂತ ಸಾವೇ ವಾಸಿ ಬಿಡು,
ನಿನ್ನ ಬದಲು ಅದನ್ನೇ ಪ್ರೀತಿಸಬೇಕಿತ್ತು
ಎಂದು ಅಸೂಯೆ ಹುಟ್ಟಿಸುತ್ತಾಳೆ.
ಪೊಸೆಸಿವ್ ಆದ ಬದುಕು ಅವಳನ್ನು
ಮತ್ತೆ ತೆಕ್ಕೆಗೆ ಸೆಳೆದುಕೊಂಡು
‘ನಾನೇ ಹೆಚ್ಚು ಇಷ್ಟ ಎಂದು ಹೇಳು’
ಎಂದು ಮುದ್ದಿಸುತ್ತಲೇ ಇನ್ನಷ್ಟು ಹಿಂಸಿಸುತ್ತದೆ.

-ಸಮುದ್ಯತಾ ಕಂಜರ್ಪಣೆ, ಬೆಂಗಳೂರು

Leave a Reply

Your email address will not be published. Required fields are marked *