ಅನುದಿನ ಕವನ-೫೪೨, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಜಿಂದಾಲ್ ತೋರಣಗಲ್ಲು(ಬಳ್ಳಾರಿ ಜಿ.), ಕವನದ ಶೀರ್ಷಿಕೆ:ತೊಯ್ದ ಮನ

ತೊಯ್ದ ಮನ👇

ಮನವೆಂಬುದು ಮಳೆಯಲ್ಲಿ
ತೋಯುತ್ತಿದೆ, ಏಕೋ ಗೊತ್ತಿಲ್ಲ
ಆದರೂ, ತೊಯ್ದ ಮನಸ್ಸಿಗೆ
ನಿರಾಳತೆಯೊಂದು ಕಾಡುತ್ತಿದೆ.
ಈ ನಿರಾಳತೆಗೆ ಯಾವ ಕಾರಣವೋ ಗೊತ್ತಿಲ್ಲ…

ಕಾನನದ ನಡುವೆ ಕಾರಣವಿಲ್ಲದೆ
ಬರುವ ಮಳೆಗೆ ಯಾವ ಯೋಚನೆ ಯೋಜನೆ ಎಂಬುದಿಲ್ಲ,,ಆದರೂ ಗೊತ್ತಿಲ್ಲ
ಮನವೆಂಬುದು ನಿರಾಳತೆಯಲ್ಲಿ
ತೊಯ್ದಿದೆಯಲ್ಲ…..

ರುಜುವಿಲ್ಲದ ಮಳೆಗೆ ಯಾವ ಕೊಡೆ ಹಿಡಿಯಲಿ.?
ಸುತ್ತಲೂ ಸುಯ್ಯಿ ಎಂದು ಬೀಸುವ ತಂಗಾಳಿಯ
ಮಳೆಗೆ ಮೈಯ್ಯ ಯಾವುದೋ
ನರಮಂಡಲದಗ್ನಿ ಎನ್ನನ್ನು ಕಾಡಿ
ತಳ ಮಳಿಸುತ್ತಿದೆ….

ಈ ತಳ ಮಳ ಧಮನಿಗೆ ಅಡುಗೆ
ಮನೆಯ ಸೌಟು,ಪ್ಲೇಟುಗಳು
ಢಣ ಢಣ ಭಾರಿಸುತ್ತ ವ್ಯಂಗ್ಯ
ಸೂಚಿಸುತ್ತಿವೆ…

ಬಾಗಿ ಬಗ್ಗುವ ಕೆಲಸಕ್ಕೆ ಮಾನ್ಯತೆ ಒಡ್ದುತ್ತಿಲ್ಲ.
ಹರಿಯುವ ನದಿಗೆ
ಒಡ್ದು ಕಟ್ಟಿದಂತಾಗಿದೆ.. ಕೆನೆಗಟ್ಟಿದ ಹೆಪ್ಪಾದ ಮೊಸರಿಗೆ
ಮಜ್ಜಿಗೆಯ ಕಡಗೋಲು ಕಟಿಯಲು ಸಜ್ಜಾಗುತ್ತಿದೆ…

ಇಂತಹ ವಾತಾವರಣದ ಸಜೆಗೆ
ಕಪ್ಪುಕಾಡಿಗೆಯು ಬೀಸುವ ಕಲ್ಲಿನಲಿ ತಿರುಗುವ ನೋವನ್ನು
ನೋಡ ಬಯಸಿದೆ….
ನೊಂದು ಹೊರಬಂದ ಕಣ್ಣೀರ ಹನಿಗೆ ಬಿದ್ದ ಗೋಡೆಯ ಇಟ್ಟಂಗಿಯು ಎನ್ನಂತೇ ನೀನು
ಎಂದು ಬಯಸಿದೆ…..

ಇದಕ್ಕೆ ಮೌನದಿಂದ ಅರ್ಭಟಿಸಲಾ?
ಸೃಷ್ಟಿಯ ಘಮ್ಯತೆಯ ಪ್ರಶ್ನಿಸಲಾ?..

ಬರುತ್ತಿರುವ ಸ್ವಾತಂತ್ರ್ಯಕ್ಕೆ ಮನದ ಕಂಬಿ ಗಟ್ಟಿಯಾಗಿ
ಹಿಡಿದಿಟ್ಟುಕೊಂಡು
ಬೆಳಕಿಲ್ಲದ ದವಾಖಾನೆಗೆ
ತಳ್ಳುತಿದೆ….

ಏಕೋ ಅರಿಯೆ?
ಇಂದಿನ ತವಕಕ್ಕೆ ಬೆಚ್ಚನೆಯ
ಕಂಬಳಿ ದೂರ ಸರಿಯುತ್ತಿದೆ
ಎನ್ನೊಡಲ ಸ್ಪರ್ಶ ಬೇಡವೆಂದು…..

ಹೇ ಚಿಂತನೆಯ ಅರಿವೇ
ಪಶ್ಚಾತ್ತಾಪದ ದೇಗುಲದಲ್ಲಿ
ಎನ್ನಿರಿಸಬೇಡ
ತೊಲಗು ನನ್ನಿಂದ ಎಣಿಸಲಾರದ ದಾರಿಗೆ……

-ಡಾ. ಕೃಷ್ಣವೇಣಿ ಆರ್.ಗೌಡ, ತೋರಣಗಲ್ಲು
*****

Leave a Reply

Your email address will not be published. Required fields are marked *