ಅನುದಿನ ಕವನ-೫೭೮, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್


ಎದೆಯೊಳಗೆ ಚಿಮ್ಮಿದವು ಸಾವಿರ ಹಕ್ಕಿಗಳು ಜತೆಯಲಿರುವಾಗ ನೀನು
ಮನದೊಳಗೆ ನಲಿದವು ಸಾವಿರ ನವಿಲುಗಳು ಜತೆಯಲಿರುವಾಗ ನೀನು

ಪ್ರೀತಿಯೆಂಬ ಪದವೂ ಹಳತಾಗಿ ಹೋಯಿತು ನಿನ್ನ ಸಾಮೀಪ್ಯದಲಿ
ಮಾತುಗಳೂ ಸೇರಿದವು ಮೌನದ ಒಡಲೊಳು ಜತೆಯಲಿರುವಾಗ ನೀನು

ಎಲ್ಲಿ ಹೇಗೆ ಏಕೆ ಒಲವು ಮೂಡಿತೆಂಬುದ ಒರೆಗೆ ಹಚ್ಚಲೇಕೆ ಇನ್ನು
ಒಲುಮೆಯೆ ಉಸಿರಾಯಿತು ಜಗದೊಳು ಜತೆಯಲಿರುವಾಗ ನೀನು

ಕಳೆವ ಪ್ರತಿ ಚಣಗಳು ಹೊಸ ಚಣಗಳಿಗೆ ಸಾಕ್ಷಿಯಾಗತೊಡಗಿಹವು
ಕವಿತೆಯೇ ರೂಪುಗೊಂಡಿತು ಕಾಲದೊಳು ಜತೆಯಲಿರುವಾಗ ನೀನು

ಜಗದಲಿ ಅದೆಷ್ಟು ಪ್ರೀತಿಯ ನೋವು ನಲಿವು ಬೆರೆತಿಹವೊ ಅರಿಯೆನು
ಸಿದ್ಧನ ಬದುಕೇ ಸೇರಿತು ನಿನ್ನುಸಿರೊಳು ಜತೆಯಲಿರುವಾಗ ನೀನು

-ಸಿದ್ಧರಾಮ ಕೂಡ್ಲಿಗಿ
*****                                                       [Sketch & Gajal: Siddharam kudligi]

Leave a Reply

Your email address will not be published. Required fields are marked *