ಶಿವಮೊಗ್ಗ: ಸಂಶೋಧಕರ ಆಲೋಚನೆಗಳು ಸಮಾಜ ಕಟ್ಟಲು ಸಹಕಾರಿಯಾಗಿರಬೇಕು ಎಂದು ಕುವೆಂಪು ವಿ.ವಿ. ಕುಲಸಚಿವ ಎ.ಎಲ್. ಮಂಜುನಾಥ್ ಅವರು ಅಭಿಪ್ರಾಯಪಟ್ಟರು.
ಕುವೆಂಪು ವಿ.ವಿ. ಕನ್ನಡ ಭಾರತಿಯ ಸಂಶೋಧನಾರ್ಥಿಗಳ ವೇದಿಕೆಯ ವತಿಯಿಂದ ಶಂಕರಘಟ್ಟದ ವಿಶ್ವವಿದ್ಯಾಲಯ ಆವರಣದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ “ಕನ್ನಡ ಸಂಸ್ಕೃತಿ ಸಾಹಿತ್ಯ : ಪುನರ್ಮನನ” ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಚಟುವಟಿಕೆ ಬಹಳ ಮುಖ್ಯವಾದದ್ದು. ಸಂಶೋಧನಾರ್ಥಿಗಳು ಸದಾ ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿರಬೇಕು.
ಸದಾ ಹೊಸತರ ಹುಡುಕಾಟ ಸಂಶೋಧನಾ ಬರಹಗಳಲ್ಲಿ ಕಾಣಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕೃತಿಯ ಸಂಪಾದಕರಾದ ಡಾ. ಜಿ. ಪ್ರಶಾಂತ ನಾಯಕ ಮಾತನಾಡಿ, ಬರವಣಿಗೆ ಸುಲಭಕ್ಕೆ ದಕ್ಕುವ ಸಂಗತಿಯಲ್ಲ. ಬದಲಾಗಿ ಕಠಿಣವಾದ ಪರಿಶ್ರಮವನ್ನು ಬೇಡುತ್ತದೆ. ಸಂಶೋಧನಾ ವಿದ್ಯಾರ್ಥಿಗಳು ಸದಾ ಓದು ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಉತ್ತಮ ಸಂಶೋಧನಾ ಬರಹಗಳನ್ನು ನೀಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಳಪೆ ಗುಣಮಟ್ಟದ ಸಂಶೋಧನಾ ಪ್ರಬಂಧಗಳು ರಚನೆಯಾಗುತ್ತಿರುವುದು ಶೈಕ್ಷಣಿಕ ವಲಯದ ಅಧೋಗತಿಯ ಸೂಚಕವಾಗಿದೆ. ಕೆಲವರಾದರು ಪ್ರಾಮಾಣಿಕವಾಗಿ ಬರವಣಿಗೆ ಮಾಡುವ ಮೂಲಕ ಸಂಶೋಧನೆಯ ಗುಣಮಟ್ಟ ಕಾಯ್ದುಕೊಳ್ಳಬೇಕಿದೆ. ಸ್ವತಂತ್ರವಾದ ಬರವಣಿಗೆ ಆತ್ಮ ಸಂತೋಷವನ್ನು ನೀಡುವುದರ ಜೊತೆಗೆ ಸಮಾಜಕ್ಕೆ ಕೊಡುಗೆಯಾಗಬಲ್ಲುದು ಎಂದು ಅಭಿಪ್ರಾಯಪಟ್ಟರು.
ಕನ್ನಡ ಭಾರತಿಯ ನಿರ್ದೇಶಕರಾದ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಮಾರು ಎರಡು ಸಾವಿರ ವರ್ಷಗಳಲ್ಲಿ ರಚನೆಯಾಗಿರುವ ಕನ್ನಡ ಸಾಹಿತ್ಯವನ್ನು ಹಲವು ದೃಷ್ಟಿಕೋನಗಳಿಂದ ಅವಲೋಕನ ಮಾಡುವ ಪ್ರಯತ್ನವನ್ನು ಸಂಶೋಧಕರು ಮಾಡಿದ್ದಾರೆ. ರಾಜ್ಯದ ಹಲವಾರು ಭಾಗಗಳಿಂದ ಸಂಶೋಧನಾರ್ಥಿಗಳು ಬಂದು ಈ ವಿಚಾರ ಸಂಕಿರಣದಲ್ಲಿ ತಮ್ಮ ಪ್ರಬಂಧ ಮಂಡಿಸಿದ್ದಾರೆ. 81 ಲೇಖನಗಳು ಶೋಧ ಸಂಭ್ರಮ ಕೃತಿಯಲ್ಲಿ ಪ್ರಕಟವಾಗಿವೆ ಎಂದರು.
ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ರಂಗಸ್ವಾಮಿ ಅವರು ಕೃತಿಯ ಕುರಿತು ಮಾತನಾಡಿದರು. ಪ್ರಕಾಶಕರಾದ ಸುನೀಲ್ ಕುಮಾರ್, ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ. ಎಸ್.ಎಂ. ಮುತ್ತಯ್ಯ, ಡಾ. ಹಾ.ಮಾ. ನಾಗಾರ್ಜುನ, ಡಾ. ಪ್ರಕಾಶ್ ಮರ್ಗನಳ್ಳಿ, ಡಾ. ಮೋಹನ್ ಚಂದ್ರಗುತ್ತಿ ಉಪಸ್ಥಿತರಿದ್ದರು. ವಿಭಾಗದ ಡಾ. ನವೀನ್ ಮಂಡಗದ್ದೆ ಸ್ವಾಗತಿಸಿದರು. ಡಾ. ರವಿನಾಯ್ಕ ವಂದಿಸಿದರು.