ಅನುದಿನ ಕವನ-೧೮೭೯, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಮೌನ

ಮೌನ

ಮೌನವೊಂದು
ಮೈಗೂಡಿಸಿಕೊಂಡೆ ನಾ
ಮೂರ್ಖ ಜನರೆದುರು ಮಾತನಾಡಿ ಮಾತಿನ ಮೌಲ್ಯ ಕಳೆಯಬಾರದೆಂದು.

ಮೌನವೊಂದು ಮೈಗೂಡಿಸಿಕೊಂಡೆ ನಾ
ಭಾವನೆಗಳನು ಅರ್ಥಮಾಡಿಕೊಳ್ಳದ ಜನರೆದುರು ಮಾತಾಡಿ ಮತಿಹೀನಳೆನಿಕೊಳಬಾರದೆಂದು.

ಮೌನವೊಂದು ಮೈಗೂಡಿಸಿಕೊಂಡೆ ನಾ ಮುಖವಾಡದ ಜನರೆದುರು ಸುಳ್ಳಿನ ಕಂತೆಯೊತ್ತು ನಟಿಸಲುಬಾರದೇ ನಗೆಪಾಟಲಿಗಿಡಾಗಬಾರದೆಂದು

ಮೌನವೊಂದು ಮೈಗೂಡಿಸಿಕೊಂಡೆ ನಾ
ಪ್ರೀತಿ ಚಿಗುರಬಹುದೆನೋ ಎಂಬ ಭ್ರಮೆಯಲಿ
ಅವ್ಯಕ್ತ ಭಾವನೆಗಳಿಗೆ ನಾನೇ ಸೋಲುತ ಹುಚ್ಚುತನದ ಪಟ್ಟ ಕಟ್ಟಿಕೊಳ್ಳಬಾರದೆಂದು.

ಮೌನವೊಂದು ಮೈಗೂಡಿಸಿಕೊಂಡೆ ನಾ
ಮಾತು ಬೆಳ್ಳಿ,ಮೌನ ಬಂಗಾರವೆಂದು ನಟಿಸುತ್ತ
ನಯವಂಚಕತನದ ನಗೆ ಬೀರುತ್ತ ಮೌನವನೇ ಪ್ರೀತಿಸುತ್ತೇವೆ ಎನುವ ಸುಭಗರಮುಂದೆ ಮೌನದ ತಾಕತ್ತು ತೋರಿಸಲೆಂದು.

ಮೌನವೊಂದು ಮೈಗೂಡಿಸಿಕೊಂಡೆ ನಾ
ನನ್ನ ಮನದ ‘ಶಾಂತ’ ತೆಯನು
ವೃಥಾ ವ್ಯರ್ಥ ಮಾತಿನಿಂದ ಯಾರೂ ಕದಡದಿರಲೆಂದು.

-ಶಾಂತಾ ಪಾಟೀಲ್, ಸಿಂಧನೂರು
*****

Leave a Reply

Your email address will not be published. Required fields are marked *