ರಾಷ್ಟ್ರೀಯ ವೈದ್ಯರ ದಿನಾಚರಣೆ: ಬಳ್ಳಾರಿಯಲ್ಲಿ ವೈದ್ಯರಿಗೆ ಸನ್ಮಾನ

ಬಳ್ಳಾರಿ,ಜು.01: ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ರೂಪನಗುಡಿಯ ಸಮುದಾಯ ಆರೋಗ್ಯ ಕೇಂದ್ರ ಕಾರ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರಾದ ಡಾ.ಹೆಚ್.ನಿಜಾಮುದ್ದೀನ್, ಡಾ.ನಾರಾಯಣ ಬಾಬು, ಡಾ.ಪ್ರಿಯಾಂಕಾ ರಡ್ಡಿ ಯವರನ್ನು ಸಂಸ್ಕೃತಿ ಶಾಲೆಯ ಶಿಕ್ಷಕರು ಸನ್ಮಾನಿಸಿದರು.
ಶಾಲೆಯ ಸಂಯೋಜಕಿ ದೀಪಾ ಅವರು ಮಾತನಾಡಿ ವಿಶ್ವದಾದ್ಯಂತ ಹರಡಿದ ಕರೋನಾದಿಂದಾಗಿ ಪ್ರತಿಯೊಬ್ಬ ವೈದ್ಯರು ಹಗಲು ರಾತ್ರಿ ಸೇವೆಯಲ್ಲಿ ತೊಡಗಿ ಜನರ ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದರೆ ಎಂದರು.
ವೈದ್ಯರಿಗೆ ಕೃತಜ್ಞತೆ ಸಲ್ಲಿಸಲು ಶಾಲಾ ಮಕ್ಕಳು ತಯಾರಿಸಿದ ಶುಭಾಶಯ ಪತ್ರ ಹಾಗೂ ಹೂ ಗುಚ್ಚಗಳನ್ನು ನೀಡಿ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಕೃತಿ ಶಾಲೆಯ ಶಿಕ್ಷಕಿಯರಾದ ಅನಿತಾ, ವಾಸಿಮಾ, ರಿಜ್ವಾನಾ, ಪೂರ್ಣಿಮಾ, ನಳಿನಿ, ವೈಷ್ಣವಿ,ಸಂಸ್ಕೃತಿ ಶಾಲೆಯ ಮುಖ್ಯಸ್ಥ ದರೂರು ರಮೇಶ್ ಮತ್ತಿತರರು ಇದ್ದರು.


ಆಯುಷ್ ಇಲಾಖೆ: ಜಿಲ್ಲಾ ಆಯುಷ್ ಇಲಾಖೆ ನಗರದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ವೈದ್ಯರ ದಿನಾಚರಣೆಯನ್ನು ಆಯೋಜಿಸಿತ್ತು.
ಕರ್ತವ್ಯನಿರತ ಆಯುಷ್ ವೈದ್ಯಾಧಿಕಾರಿಗಳಿಗೆ ಮತ್ತು ಇತರೆ ಸಿಬ್ಬಂದಿಗಳಿಗೆ ಕೋವಿಡ್ 19 ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಕರೋನಾ ವಾರಿಯರ್ಸ್ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಆಯುಷ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಸಿಬ್ಬಂದಿ ವರ್ಗದವರಿಗೆ ಹಾಗೂ ಗ್ರೂಪ್ ಡಿ ನೌಕರರಿಗೂ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಮ್ಸ್ ಪ್ರಾದ್ಯಾಪಕ ಡಾ.ಹಳ್ಳಿಕರಿಬಸಪ್ಪ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಟಿ ಫಣೀಂಧರ, ತಾರಾನಾಥ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ರಾಜಶೇಖರ್ ಗಾಣಿಗೇರ ಕೆಜಿಎಎಂಒಎ ಅಧ್ಯಕ್ಷ ಡಾ.ವಿಜಯೇಂದ್ರಾಚಾರ್, ಜಿಲ್ಲಾ ಆಯುಷ್ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಶರಣಬಸಪ್ಪ ಎಸ್.ಜಿನಗಾ, ತಾರಾನಾಥ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಧ್ಯಾಪಕರಾದ ಡಾ. ಶಿವು ಅರಕೇರಿ, ಡಾ.ಪ್ರಕಾಶ ಪಾಟೀಲ ಎಎಫ್‍ಐ ಮತ್ತು ಇತರರು ಇದ್ದರು.
*****

Leave a Reply

Your email address will not be published. Required fields are marked *