ಅನುದಿನ ಕವನ-೧೦೫೨ ಕವಿ: ಮಹಿಮ, ಬಳ್ಳಾರಿ

ಇರಬೇಕಿತ್ತು ನನಗೆ
ಕರುಳ ಕುಡಿಯೊಂದು
ಕಣ್ಣೀರೊರೆಸುವ ಕೈಯೊಂದು

ಅಪ್ಪಾ,ನಾನಿದ್ದೇನೆ
ಎನ್ನುವ ಕೊರಳೊಂದು
ನನ್ನ ಕಂಬನಿಗೆ ಮಿಡಿಯುವ
ಮನಸೊಂದು
ಇರಬೇಕಿತ್ತು ನನಗೆ
ಕರುಳ ಕುಡಿಯೊಂದು

ಇವೆ ಸುತ್ತಲೂ ಹತ್ತಾರು ಕೈಗಳು
ಇದ್ದರೇನು ಪ್ರಯೋಜನ
ಕಾಸಿಗೆ ಹಂಬಲಿಸುವ ಪೀಡಿಸುವ ಹೇಸಿಗೆ ಮನಗಳವು
ಅವು ಯಾವುವೂ ಕಂಬನಿಯ ಒರೆಸುವ ಕೈಗಳಲ್ಲ
ಹಿಂಸಿಸುವ ಮನಗಳವು

ಇರಬೇಕಿತ್ತು ನನಗೆ ಕರುಳ ಕುಡಿಯೊಂದು

ನೊಂದು ಭೋರ್ಗರೆದು ಅಳುವಾಗ
ಸಂತೈಸಿ ಕಣ್ಣೀರೊರೆಸಿ
ಅಪ್ಪಾ,ನಾನಿಲ್ಲವೇನು?
ಕೇವಲ ಗಂಡು ಮಕ್ಕಳು ಮಾತ್ರ ನಿನ್ನ ಮಕ್ಕಳೇನು?
ನಾನಲ್ಲವೇನು..
ನಾನಿಲ್ಲವೇನು
ಎನ್ನುವ
ತಾಯಿ ಮನದ
ಮಗಳೊಂದು ನನಗಿರಬೇಕಿತ್ತು…


-ಮಹಿಮ, ಬಳ್ಳಾರಿ
—–

Leave a Reply

Your email address will not be published. Required fields are marked *