
ಬಳ್ಳಾರಿ, ಜು.25: ಬೆಂಗಳೂರಿನ ಕೆಮಿಸ್ಟ್ರಿ ಅಧ್ಯಾಪಕ ರೂಪೇಶ್ ಪುತ್ತೂರು ಅವರ ಸಾಮರಸ್ಯ- ಬಾಂಧವ್ಯ ಪಾದಯಾತ್ರೆ ಶನಿವಾರ ಮಧ್ಯಾಹ್ನ ಜಿಲ್ಲೆಯ ತೋರಣಗಲ್ಲು ತಲುಪಿತು.
ತಾಳೂರಿನ ಯುವ ಸಂಘಟಕ ಬಂಡ್ರಿಯಂಕಪ್ಪ ಅವರು ತೋರಣಗಲ್ಲು ಹೊರವಲಯದ ಕುರೇಕುಪ್ಪ ಗ್ರಾಮದಲ್ಲಿ ಆತ್ಮೀಯ ವಾಗಿ ರೂಪೇಶ್ ಪುತ್ತೂರು ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ಸಿಂಕದರ್ ತೋರಣಗಲ್ಲು ಇದ್ದರು.
ಮಧ್ಯಾಹ್ನ ತೋರಣಗಲ್ಲಿನ ಶ್ರೀ ಬಸವೇಶ್ವರ ಪ್ರಾಢಶಾಲೆಯ ಮಕ್ಕಳು ಮತ್ತು ಸಂಜೆ ಹಿರಿಯ ಬಯಲಾಟ ಕಲಾವಿದ, ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತಾಳೂರಿನ ಬಂಡ್ರಿ ಲಿಂಗಪ್ಪ ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರೊಂದಿಗೆ ರೂಪೇಶ್ ಪುತ್ತೂರು ಚರ್ಚೆ ನಡೆಸುವರು ಎಂದು ಬಂಡ್ರಿ ಯಂಕಪ್ಪ ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ತಿಳಿಸಿದರು.

ಜು. 11, ಬೀದರಿನಿಂದ-ಬೆಂಗಳೂರಿಗೆ
‘ಸೌಹಾರ್ದದ ಹೆಜ್ಜೆ ಸಮಾಜದ ಬೆಳಕು’ ಹೆಸರಿನಲ್ಲಿ ಆರಂಭಿಸಿರುವ ರೂಪೇಶ್ ಪುತ್ತೂರು ಅವರ ಪಾದಯಾತ್ರೆಯ ಉದ್ದೇಶಗಳು:
ಕನ್ನಡ ಭಾಷಾ ಅಸ್ಮಿತೆ ಅದರ ಸಹೋದರ ಭಾಷೆಗಳೊಂದಿಗಿನ ಬಹುತ್ವದ ಸ್ನೇಹ, ಸೌಹಾರ್ದ ಬಾಂಧವ್ಯದ ಸಿಹಿ ಹರಡುವುದು.
ನೆಲ ಜಲ ಸಂಸ್ಕೃತಿಗಳ ಮಧ್ಯೆ ಇರುವ ಮೌಲ್ಯಯುತ ಸೌಹಾರ್ದ ಬಾಂಧವ್ಯ.
ಕನ್ನಡ ಮಾಧ್ಯಮ ಸರ್ಕಾರಿ ಶಾಲಾ ಶಿಕ್ಷಣ ಸಂಸ್ಥೆಗಳು, ಪ್ರವಾಸೋದ್ಯಮ ಮುಖ್ಯ.
ತಂದೆ-ತಾಯಿ-ವಿದ್ಯಾರ್ಥಿ-ಶಿಕ್ಷಕರ ಮಧ್ಯೆ ಇರುವ ಅಮೂಲ್ಯ ಸೌಹಾರ್ದ ಬಾಂಧವ್ಯ.
ಜಾತಿ, ಪಂಥ ಮತ್ತು ಪಂಗಡಗಳ ನಡುವೆ ಸಹೋದರತ್ವ ಮತ್ತು ಸಾಮರಸ್ಯದ ಸಂಬಂಧಗಳು.
ಪಕ್ಷ-ವಿಪಕ್ಷಗಳ ಮಧ್ಯೆ ರಾಜ್ಯ ಸಾರ್ವಭೌಮತೆಯ ಸೌಹಾರ್ದ ಬಾಂಧವ್ಯ.
ಇದೆಲ್ಲದರ ಜೊತೆಗೆ ಕನ್ನಡ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬ ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲಿ ಶೇಕಡಾ 80ರಷ್ಟು ಉದ್ಯೋಗ ನೀಡಬೇಕು ಎಂದು ರೂಪೇಶ್ ಪುತ್ತೂರು ಅವರ ಒತ್ತಾಯಿಸುತ್ತಾರೆ.
