ಅನುದಿನ‌ ಕವನ-೧೨೧೫, ಕವಿ: ಮಹಿಮ, ಬಳ್ಳಾರಿ

ಆತ ದೂರ ಬಹು ದೂರ ನಡೆದ…
ನಡೆಯುತ್ತಲೇ ಸಾಗಿದ..

ನಡೆದದ್ದು ಸಾಕಲ್ಲವೇ?
ಎಲ್ಲಿಗೆ ನಡೆಯುತ್ತಿರುವೆ ನೀನು ಅದಾದರೂ ಬಲ್ಲೆಯೇನು?
ಯಾವುದೋ ದನಿ ಎಚ್ಚರಿಸಿತು

ಎಲ್ಲೋ ಕೇಳಿದಂತಿದೆ..ಹಾ!! ಅವಳದೇ ದನಿ ಹೌದು..ಅವಳದೇ

ನಿನ್ನೆಡೆಗೆ ಸಾಗಿ ಬರುತ್ತಿರುವೆ..ಆದರೆ ನೀನೆಲ್ಲಿಹೆಯೋ ನಾನರಿಯೆ??
ಹೇಳು ಎಲ್ಲಿರುವೆ ನೀನು??

ನಾನು ಎಲ್ಲಿಯೂ ಇಲ್ಲ..ಹುಡುಕಬೇಡ..
ನಾ ನಿನಗೆ ಸಿಗಲಾರೆ…
ನಿನ್ನ ಕಾಲುಗಳು ನೋಯುವುದಿಲ್ಲವೇ?ಯಾಕೆ ಶ್ರಮಪಡುವೆ ನೀನು..ನಿನಗೆ ಅಯಾಸ ಆಗಬಾರದೆಂದು ಹೇಳಿದೆ…

ನಿನ್ನ ದನಿ‌ ಬಂದೆಡೆಗೆ ಸಾಗಿ ಬರುವೆ..ನನಗೆ ಯಾವ ಬಾಧೆಯೂ ಇಲ್ಲ..ನೀನು ಸಿಗಬಹುದೇನೋ..ಆ ಕಡೆ ನಡೆದು ಬರಲೇ

ಬೇಡ..ನಡೆದುಬರಬೇಡ..
ನನ್ನ ಮಾತು ಕೇಳು …ನಾನು ಸಿಗಲಾರೆ..ನಾನು ಎಲ್ಲಿಯೂ ಇಲ್ಲ

ಆಕೆಯ ದನಿ‌  ಮತ್ತೆ ಕೇಳದಾಯ್ತು..

ಆತ ನಡೆಯುತ್ತಲೇ ಸಾಗಿದ ದನಿ ಬಂದೆಡೆಗೆ..
ಅಲ್ಲಿ ಹೆಜ್ಜೆಗಳು ಮೂಡಿದ್ದವು..
ಅವುಗಳ ಜಾಡಿನಲ್ಲಿಯೇ ನಡೆಯುತ್ತಾ ಹೊರಟ
ಆಕೆ ಕಾಣಿಸಲಿಲ್ಲ


-ಮಹಿಮ, ಬಳ್ಳಾರಿ
—–

Leave a Reply

Your email address will not be published. Required fields are marked *