ಬೆಂಗಳೂರು, ಜೂ.13: ಕರ್ನಾಟಕ ರಾಜ್ಯ ಸಂವಿಧಾನ ಬಳಗ ಹೆಸರಾಂತ ಅಂತರಾಷ್ಟ್ರೀಯ ಜಾನಪದ ಗಾಯಕ, ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಅವರ 75ನೇ ಹುಟ್ಟುಹಬ್ಬವನ್ನು ಜೂ.14 ರಂದು ವಸಂತ ನಗರದ ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದೆ.
ಶನಿವಾರ ಬೆಳಿಗ್ಗೆ 10-30ಗಂಟೆಗೆ ರಾಜ್ಯ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ಬಳಗದ ರಾಜ್ಯಾಧ್ಯಕ್ಷ ಎಸ್. ಜಯಕಾಂತ್ ಚಾಲುಕ್ಯ ಅವರು ತಿಳಿಸಿದರು.
ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಮಾತನಾಡಿದ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಗಡಿ ಶಾಸಕ ಬಾಲಕೃಷ್ಣ ಅವರು ವಹಿಸಲಿದ್ದಾರೆ. ರಾಮನಗರ ಶಾಸಕರಾದ ಇಕ್ಬಾಲ್ ಹುಸೇನ್ ಅವರು ಸೇರಿದಂತೆ ಹಲವು ಗಣ್ಯ ಜನಪ್ರತಿನಿಧಿಗಳು ಭಾಗವಹಿಸುವರು.
ವಿಶ್ರಾಂತ ಹೆಚ್ಚುವರಿ ಪೊಲೀಸ್ ಮಹಾನಿರ್ದೆಶಕ(ಎಡಿಜಿಪಿ) ಡಾ.ಸುಭಾಷ್ ಭರಣಿ, ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ ಅವರು ಸೇರಿದಂತೆ ನಾಡಿನ ಹಲವು ಗಣ್ಯರು, ಡಾ. ಬಾನಂದೂರು ಅವರ ಆಪ್ತರು, ಹಿತೈಷಿಗಳು, ದೂರದರ್ಶನ ಕೇಂದ್ರದ ಸಹೋದ್ಯೋಗಿಗಳು, ಜಾನಪದ ಗಾಯಕರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಗುಲ್ಬರ್ಗಾ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಸೋಮಶೇಖರ್ ಅಪ್ಪಗೆರೆ ಅವರು ಅಭಿನಂದನಾ ನುಡಿಗಳನ್ನಾಡುವರು.
ಬೆಂಗಳೂರು ನಗರ, ರಾಮನಗರ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ಡಾ. ಬಾನಂದೂರು ಅವರ ಅಭಿಮಾನಿಗಳು, ಹಿತೈಷಿಗಳು, ಬಂಧುಮಿತ್ರರು ಕಾರ್ಯಕ್ರಮ ಕ್ಕೆ ಆಗಮಿಸಿ ಯಶಸ್ವಿಗೊಳಿಸಲಿದ್ದಾರೆ ಎಂದು ಬಳಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಜಯಚಂದ್ರ ಅವರು ತಿಳಿಸಿದರು.
——