ರಮಾಬಾಯಿ ತಾಯೇ…
ನೀನೆ ಶಕ್ತಿ ನೀನೆ ಯುಕ್ತಿ ಹರಸು ತಾಯೇ ನಮ್ಮ
ಮನದ ಕೊಳೆಯ ತೊಳೆದು ನಿಂತೆ ರಾಷ್ಟ್ರಹಿತಕೆ ಅಮ್ಮ//
ತ್ಯಾಗಮಯಿ ಪ್ರೇಮಮಯಿ ರಮಾಬಾಯಿ ತಾಯೇ
ಸಂವಿಧಾನ ಬಾಳಧ್ಯಾನ ಕಾಪಿಟ್ಟೆ ತಾಯೇ
ಓದು ಅರಿವು ಜಲದ ತಿಳಿವು ಸಮಬಲದ ಭೀಮ
ನಿಂತ ನೆಲವು ಹಸಿರಾಯಿತು ನಿನ್ನಿಂದಲೇ ರಮಾ…//
ನೀನೆ ಶಕ್ತಿ ನೀನೆ ಯುಕ್ತಿ ಹರಸು ತಾಯೇ ನಮ್ಮ
ಮನದ ಕೊಳೆಯ ತೊಳೆದು ನಿಂತೆ ರಾಷ್ಟ್ರಹಿತಕೆ ಅಮ್ಮ
ಮೌನದಿಂದ ಗೆದ್ದೆ ತಾಯೇ ಸೂರ್ಯನಾಲ ಪ್ರೀತಿ
ಅಂಬೇಡ್ಕರ ಒಂದೇ ಎಂಬ ಜೀವಯಾನ ಪ್ರೀತಿ
ನೊಂದೆ ತಾಯಿ ಬಡವರಿಗೆ ಬೆಂದೆ ತಾಯಿ ಧನಿಕರೆದುರಿಗೆ
ಗುಡಿಸಲಿಗೂ ಬೆಳಕನಿಟ್ಟು ಹಾಲುಣಿಸಿದೆ ತಾಯೇ//
ನೀನೆ ಶಕ್ತಿ ನೀನೆ ಯುಕ್ತಿ ಹರಸು ತಾಯೇ ನಮ್ಮ
ಮನದ ಕೊಳೆಯ ತೊಳೆದು ನಿಂತೆ ರಾಷ್ಟ್ರಹಿತಕೆ ಅಮ್ಮ
ಚಂದ್ರಮತಿಯ ದುಃಖದಲೂ ಕನಸುಣಿಯಾದೆ ನೀನು
ಒಡವೆ ವಸ್ತ್ರಕ್ಕಿಂತ ಮಿಗಿಲು ಅಕ್ಷರವೆಂದ ಮುಗುಳು
ಲಾವಾರಸ ಪರ್ವತವನೆ ಮಂಜುಗಡ್ಡೆಯಾಗಿಸಿ
ಕರುಳಿಂದ ಕರಗಿಸಿ ಮಹಾಡ್ ಪ್ರೀತಿಯನುಣಿಸಿ//
ನೀನೆ ಶಕ್ತಿ ನೀನೆ ಯುಕ್ತಿ ಹರಸು ತಾಯೇ ನಮ್ಮ
ಮನದ ಕೊಳೆಯ ತೊಳೆದು ನಿಂತೆ ರಾಷ್ಟ್ರಹಿತಕೆ ಅಮ್ಮ
ರತ್ನದಂತಹ ಮಗ ಮಡಿದರೂ ಗಿರಿಶಿಖರದ ಮನವೇ
ಅಂಬೇಡ್ಕರರಿಗೂ ಜೀವತೇಯ್ದ ಶ್ರೀಗಂಧದ ಕೊರಡೇ
ಅನ್ನ ನೀರು ಗಾಳಿಗಂಧ ಲೋಕಪ್ರೀತಿಯನುಣಿಸಿ
ಬಡಜನತೆಗೆ ಉಸಿರಾದೆ ಈ ಮಣ್ಣಿನ ಹಣತೆ//
ನೀನೆ ಶಕ್ತಿ ನೀನೆ ಯುಕ್ತಿ ಹರಸು ತಾಯೇ ನಮ್ಮ
ಮನದ ಕೊಳೆಯ ತೊಳೆದು ನಿಂತೆ ರಾಷ್ಟ್ರಹಿತಕೆ ಅಮ್ಮ

-ಡಾ.ನಿಂಗಪ್ಪ ಮುದೇನೂರು, ಧಾರವಾಡ
—–
