ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 100 ಕೋಟಿ ರೂ ಮೀಸಲಿಡಿ: ಮುಖ್ಯಮಂತ್ರಿಗಳಿಗೆ ಕೆಯುಡಬ್ಲೂಜೆ ಆಗ್ರಹ

ಸಿಎಂ‌ ಸಿದ್ಧರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿಗಳ ಮಾಧ್ಯಮ ಆರೋಗ್ಯ ಸಂಜೀವಿನಿ ಯೋಜನೆಯನ್ನು ಎಲ್ಲಾ ಪತ್ರಕರ್ತರಿಗೂ ವಿಸ್ತರಿಸಬೇಕು. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 100 ಕೋಟಿ ರೂ. ಅನುದಾನ ಬಜೆಟ್‌ನಲ್ಲಿ ಒದಗಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಒತ್ತಾಯಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿರುವ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಜಿಲ್ಲಾ ಪತ್ರಕರ್ತರ ಸಂಘಗಳ ಕ್ಷೇಮಾಭಿವೃದ್ಧಿ ನಿಧಿಗೆ ತಲಾ 25 ಲಕ್ಷ ರೂ ಅನುದಾನ ಹಾಗೂ ತಾಲೂಕು ಪತ್ರಿಕಾ ಭವನಗಳಿಗೆ ತಲಾ 10 ಲಕ್ಷ ರೂ. ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.


ಕೋವಿಡ್ ಸಂದರ್ಭದಲ್ಲಿ ಮೃತ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರವನ್ನು ಸರ್ಕಾರದಿಂದ ಸಂತ್ರಸ್ತ ಕುಟುಂಬಗಳಿಗೆ ಕೊಡಿಸಲಾಗಿತ್ತು. ಅದೇ ರೀತಿಯಲ್ಲಿ ವೃತ್ತಿನಿರತ ಪತ್ರಕರ್ತರು ಮೃತಪಟ್ಟಲ್ಲಿ ಸಂತ್ರಸ್ತ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ನೀಡುವ ಯೋಜನೆಯನ್ನು ಜಾರಿ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಜಿಲ್ಲಾ ಮತ್ತು ತಾಲೂಕು ಮಟ್ಟದ ಪತ್ರಕರ್ತರಿಗೆ ಸೌಲಭ್ಯವಾಗಿ ನಿವೇಶನ/ಮನೆ ನೀಡುವ ಪ್ರಾಧಿಕಾರದಲ್ಲಿ ಬೋರ್ಡ್ ಮತ್ತು ಇತರ ಸಂಘಗಳಲ್ಲಿ ಪತ್ರಕರ್ತರಿಗೆ ಶೇ.5ರಷ್ಟು ಮೀಸಲಿಡಬೇಕು ಎಂದು ವಿನಂತಿಸಿದ್ದಾರೆ.
ಮಂಕುತಿಮ್ಮನ ಕಗ್ಗದ ಖ್ಯಾತಿಯ ಡಿವಿಜಿ ಅವರ ನಾಲ್ವಡಿ ಕೃಷ್ಣರಾಜ ಒಡೆಯರ್ ದೇಣಿಗೆಯಿಂದ ಸಂಸ್ಥಾಪಿತ ಕಾರ್ಯನಿರತ ಪತ್ರಕರ್ತರ ಸಂಘ ಶತಮಾನೋತ್ಸವ ಹೊಸ್ತಿಲಿಗೆ ಕಾಲಿಡುತ್ತಿದೆ. ಅದಕ್ಕಾಗಿ ಡಿವಿಜಿ ಶತಮಾನ ಸಂಭ್ರಮ ಕಾರ್ಯಕ್ರಮವನ್ನು ಪ್ರತಿ ಜಿಲ್ಲೆಯಲ್ಲಿ ಸರ್ಕಾರದಿಂದ ಆಚರಣೆ ಮಾಡಬೇಕು ಎಂದು ವಿನಂತಿಸಿದ್ದಾರೆ.

ಶಿವಾನಂದ ತಗಡೂರು

ಪತ್ರಕರ್ತರ ಸ್ನೇಹಿ ಆಗಿರುವ ತಾವುಗಳು ಕಳೆದ ಎರಡು ಬಜೆಟ್‌ನಲ್ಲಿ ಪತ್ರಕರ್ತರ ಸಂಘದ ಬೇಡಿಕೆಗಳಿಗೆ ಸ್ಪಂದಿಸಿದ್ದೀರಿ. ಈ ಬಾರಿಯೂ ಬಜೆಟ್‌ನಲ್ಲಿ ಸಂಘದ ಬೇಡಿಕೆಗಳನ್ನು ಈಡೇರಿಸಲು ಪತ್ರಕರ್ತರ ಪರವಾಗಿ ಮನವಿ ಮಾಡುತ್ತಿದ್ದೇವೆ. ಈ ಬಗ್ಗೆ ಬಜೆಟ್‌ನಲ್ಲಿ ಸೂಕ್ತ ಅನುದಾನ ಒದಗಿಸಬೇಕು ಎಂದು ಶಿವಾನಂದ ತಗಡೂರು ಅವರು ಮುಖ್ಯಮಂತ್ರಿಗಳನ್ಮು ಕೋರಿದ್ದಾರೆ.