ಅನುದಿನ ಕವನ-೧೭೫ ಕವಯತ್ರಿ: ಕು.ಹರ್ಷಿಯಾ ಭಾನು ಕವನದ ಶೀರ್ಷಿಕೆ: ಮಣ್ಣಿನ ಮಗ

ಮಣ್ಣಿನ ಮಗ

ಉತ್ತಿ ಬಿತ್ತಿ ಬೆಳೆದದ್ದು
ಅನ್ಯರ ಕೈಯಲ್ಲಿ
ಝಣ ಝಣ ಹಣವಾಗಿದೆ,
ಬಾಗಿಲಲ್ಲಿ ಕಾಯುವ ಸಾಲಗಾರರು,
ತಳಮಳಿಸುತ್ತಿದ್ದಾನೆ ರೈತ.

ಹಸಿರು ನೆಲ ಉಸಿರು ನಿಲಿಸಿ,
ವರುಷಗಳಳಿದಿವೆ,
ನೀರಿಲ್ಲದ ಒಣ ಮೋಡಗಳ
ನೊಇಡ ನೋಡುತ್ತಾ,
ಕಣ್ಣು ಮಂಜಾಗುತ್ತಿವೆ
ನಿಟ್ಟುಸಿರಿಡುತ್ತಿದ್ದಾನೆ ಅನ್ನದಾತ.

ಊರಿಗೆಲ್ಲ ಅನ್ನ ಬೆಳೆದವನು,
ತನ್ನಷ್ಟಕ್ಕೆ ಕಂಗಾಲಾದವನು,
ರಟ್ಟೆ ಕಸುವೆಲ್ಲ ಕರಗಿ,
ಕನಸುಗಳೆಲ್ಲ ಕಮರಿ,
ದಾರಿಗಾಣದೆ ಗೋಣು ಚೆಲ್ಲಿದ್ದಾನೆ,
ಮಣ್ಣಿನ ಮಗನದ್ದದೆಂಥ ದುರಂತ!

ನೇಣಿನಲ್ಲಿ ನೇತಾಡಿದವನು,
ಪ್ರಾಣವನ್ನೇ ಅರ್ಪಿಸಿದವನು,
ಭೂಮಿಯಲ್ಲೀಗ ಐಕ್ಯ,
ಬೇಡವಾಯಿತವನಿಗೆ ಜಗದ ಸಖ್ಯ,
ಸೋತು ಬಂದ ಮಗನಿಗೆ,
ಬಾಚಿ ತಬ್ಬಿಕೊಂಡಿದೆ ಭುವಿಯೊಡಲು,
ನಿಜದರ್ಥದಲಿ ಮಣ್ಣಿನ ಮಗನೀತ,
ಹೆಸರು ಅನ್ವರ್ಥ!

-ಕು. ಹರ್ಷಿಯಾ ಭಾನು
ಅರಸೀಕೆರೆ
*****

ಕು.ಹರ್ಷಿಯಾ ಭಾನು

One thought on “ಅನುದಿನ ಕವನ-೧೭೫ ಕವಯತ್ರಿ: ಕು.ಹರ್ಷಿಯಾ ಭಾನು ಕವನದ ಶೀರ್ಷಿಕೆ: ಮಣ್ಣಿನ ಮಗ

  1. ಇದು ರೈತನ ಉತ್ತಮ ಕವನಗಳಲ್ಲೊಂದು.

    ಅವನ ಹೆಗಲಿನಲ್ಲಿ ಕಷ್ಟವೆಂಬುದು ಯಾವಾಗಲೋ ಏರಿ ಕುಳಿತಾಗಿದೆ. ರೈತ ಅನ್ನುವ ಪದವೇ ಪರಿಶ್ರಮದ ಪ್ರತಿಬಿಂಬ..!

    ಅವನು ಶಕ್ತನಾದಷ್ಟು ಭೂಮಂಡಲದ ಮಾನವಕುಲದ ಹೊಟ್ಟೆಯೆಂದೂ ಖಾಲಿಯಿರದು..!

    ಅವನನ್ನು ಸೋಲಲು ಬಿಡದೇ ಗೆಲುವಿಗಾಗಿಯೇ ಪ್ರಾರ್ಥಿಸೋಣ. ಏಕೆಂದರೆ ಅವನ ಗೆಲುವೇ ನಮ್ಮ ಗೆಲುವೂ ಸಹ. ಹರ್ಷು ತಂಗಮ್ಮಾ..n

Leave a Reply

Your email address will not be published. Required fields are marked *