ಅನುದಿನ ಕವನ-೨೬೭, ಕವಿ: ಡಾ. ಸದಾಶಿವ ದೊಡಮನಿ, ಇಲಕಲ್ಲು, ಕವನದ ಶೀರ್ಷಿಕೆ: ಮುನಿಸಿನ ದಿರಿಸು ಎಂದೂ ತೊಡದಿರು ಚೆಲುವೆ….

ಮುನಿಸಿನ ದಿರಿಸು ಎಂದೂ ತೊಡದಿರು ಚೆಲುವೆ

ಮುನಸಿನ ದಿರಿಸು ಎಂದೂ ತೊಡದಿರು ಚೆಲುವೆ
ಜೀವನ ತಾಳ, ಲಯಗಳು ತಪ್ಪುವವು ಒಲವೆ
ಹಗೆತನ ಹೊಗೆಯನು ಎಂದೂ ಹರಡದಿರು ಚೆಲುವೆ
ಬಾಳಿನ ಉಸಿರನು, ಹಸಿರನು ನುಂಗುವುದು ಒಲವೆ

ನಗು ನಗುತ್ತಲೇ ಇರು, ನಲಿವನು ಹೆರು ನಂದನವಾಗುವುದು ಬಾಳ್ವೆ
ತಾಮಸ ಸುಡು, ಸಾತ್ವಿಕತೆ ಗಿಡವ ನೆಡು
ನೆರಳಾಗುವುದು ಬಿಸಿಲು ಬದುಕ ನೆತ್ತಿಗೆ

ನಾ ನೀ ಎಂಬ ಸ್ಪರ್ಧೆಯೇ ಬೇಡ, ಬೇಡ
ನಮ್ಮೊಳು ಹೊಮ್ಮಲಿ ರಾಗಗಳ ಆಲಾಪ
ಸಮರಸದ ಒಡವೆ ಧರಿಸೋಣ ಚೆಲುವೆ
ಒಲವಿಲ್ಲದ ಬಾಳ್ವೆ ರಸವಿಲ್ಲದ ಕಬ್ಬು ಸಿಪ್ಪೆ

ತಪ್ಪು ಒಪ್ಪಿಗೆ ನಾವುಗಳೇ ಚೂರ್ಣ ಪರ್ಣ
ತಿಳಿದು ನಡೆಯುವುದೇ ಬಾಳ್ವೆಯ ಹೂರಣ
ಅಡವಿ-ಆರ್ಯಾಣ ಆಗಲಿ ನವ ನಂದನ
ಕೂಡಿ ಬಾಳುವುದೇ ಸುಖೀ ಜೀವನ ಕಿರಣ

-ಡಾ. ಸದಾಶಿವ ದೊಡಮನಿ, ಇಲಕಲ್
*****

Leave a Reply

Your email address will not be published. Required fields are marked *