ಅನುದಿನ ಕವನ-೬೨೨, ಕವಯತ್ರಿ:ಡಾ.ಸಿ. ನಂದಿನಿ, ಬೆಂಗಳೂರು, ಕವನದ ಶೀರ್ಷಿಕೆ: ಕಥೆ ಮುಗಿದ ಸಮಯ

ಕಥೆ ಮುಗಿದ ಸಮಯ

ಕಥೆಗಳ ಪಾತ್ರಗಳಿಗೆಲ್ಲಾ
ಜೀವತಂತು ಹೆಣೆ ಹೆಣೆದು
ಉಸಿರು ರವಾನಿಸಿ
ಅವೆಲ್ಲಾ ಜೀವ ತುಂಬಿಕೊಳ್ಳುತಿರೆ
ಹಡೆದು ಹಗುರಾದ
ಅವ್ವನ ಮೊಗದ ತೃಪ್ತಿ
ಪದ ಪದಗಳಲ್ಲೂ
ಗೋಚರಿಸಿದ್ದು ಜೀವಲಹರಿ

ಜೋಗಿಯ ಜೋಳಿಗೆ
ತುಂಬಿ ಹೊಯ್ದಡಿತೇ
ಕಥೆಯ ಪಾತ್ರಗಳ ಭಾರಕೆ
ಅದ್ಯಾವ ಶಾಪದ ಸರಕುಗಳೋ
ಅಣತಿಯಿಲ್ಲದೆ ಸಾವೂ ಸುಳಿಯದು
ಯಾರ್ಯಾರೋ ಹೊತ್ತೋಯ್ದು
ಕೊನೆಯಲ್ಲಿ ಉಳಿದದ್ದು
ಶುಷ್ಕ ಪಾತ್ರವೊಂದೇ

ನಿನ್ನೆದೆ ಬಡಿತವೇ
ಹೇಳಿದ ಕಥೆಯಿದು
ಕಿವಿಯಾದವಳಿಗೆ
ಯಾರೋ ಸೃಷ್ಟಿಸಿದ
ಶುಷ್ಕ ಪಾತ್ರ ಬೇಕಿಲ್ಲವೆನಿಸಿದೆ
ಕೊನೆಯಲೊಮ್ಮೆ ಕೇಳಿಸು
ಕಥೆ ಮುಗಿದ ಸಮಯದ
ಆನಂದ ಅನುಭಾವಿಸಲಿ ಮನ

ಈಗಲಾದರೂ ಮೌನ ಪೆಟ್ಟಿಗೆ
ತೆರೆದು ನೋಡು
ಮುಗಿದ ಕಥೆ ಹೇಳಿದ್ದಿಷ್ಟೇ
ಇದು ಎಂದೆಂಗಿಗೂ
ಜೊತೆಗೂಡದ
ಸಮಾನಾಂತರ ರೇಖೆ

-ಡಾ.ಸಿ. ನಂದಿನಿ, ಬೆಂಗಳೂರು                           *****

Leave a Reply

Your email address will not be published. Required fields are marked *