ಬಳ್ಳಾರಿ, ಜೂ.9: ದಕ್ಷತೆ, ಪ್ರಾಮಾಣಿಕತೆಗೆ ಹೆಸರಾಗಿರುವ ಬೆಂಗಳೂರಿನ ನಿಕಟಪೂರ್ವ ಪೊಲೀಸ್ ಆಯುಕ್ತ ಬಿ.ದಯಾನಂದ ಅವರನ್ನು ರಾಜ್ಯ ಸರ್ಕಾರ ತಕ್ಷಣ ಹುದ್ದೆಗೆ ಮರು ನೇಮಕ ಮಾಡಬೇಕೆಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಬಳ್ಳಾರಿ ಜಿಲ್ಲಾಧ್ಯಕ್ಷ ಡಾ.ಗಾದಿಲಿಂಗನಗೌಡ ಹೇಳಿದರು.
ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿ, ಉತ್ತಮ ಅಧಿಕಾರಿ ಎನಿಸಿಕೊಂಡಿರುವ ದಯಾನಂದ ಅವರನ್ನು ಆರ್ ಸಿಬಿ ವಿಜಯೋತ್ಸವ ವೇಳೆ ನಡೆದ ಅವಘಡಕ್ಕೆ ಹೊಣೆ ಮಾಡಿ ಅಮಾನತು ಮಾಡಿರುವುದು ಖಂಡನೀಯ ಎಂದರು.
ಅಹಿಂದ ನಾಯಕ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ನಾವು ಗೌರವಿಸುತ್ತೇವೆ, ಆದರೆ ಆರ್ ಸಿಬಿ ಸಂಭ್ರಮ ವೇಳೆ ನಡೆದ ಕಾಲ್ತುಳಿತ ಪ್ರಕರಣದ ತನಿಖೆಯೇ ಆಗಿಲ್ಲ, ತಪ್ಪಿತಸ್ಥರು ಯಾರೆಂದು ಗೊತ್ತಾಗಿಲ್ಲ, ಹೀಗೆ ಏಕಾಏಕಿ ಶೋಷಿತ ಸಮುದಾಯದ ಅದರಲ್ಲೂ ಅಖಂಡ ಬಳ್ಳಾರಿ ಜಿಲ್ಲೆಯವರಾದ ದಯಾನಂದ ಅವರ ಅಮಾನತನ್ನು ತಕ್ಷಣ ಹಿಂಪಡೆದು, ಬೆಂಗಳೂರಿನ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಬೇಕೆಂದು ಡಾ.ಗಾದಿಲಿಗನಗೌಡ ಒತ್ತಾಯಿಸಿದರು.
ನಮ್ಮ ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಡಾ.ಗಾದಿಲಿಂಗನಗೌಡ ಎಚ್ಚರಿಸಿದರು.
ಜಿಲ್ಲಾ ಒಕ್ಕೂಟದ ಗೌರವಾಧ್ಯಕ್ಷ ಎ.ಮಾನಯ್ಯ ಮಾತನಾಡಿ, ತಮ್ಮ ಈವರೆಗಿನ ಸೇವಾ ಅವಧಿಯಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿರುವ ದಯಾನಂದ ಅವರ ಮರು ನೇಮಕ ಆಗಬೇಕು. ಅವರ ಅಮಾನತು ರದ್ದು ಮಾಡಿ ಸರ್ಕಾರ ಈ ಹಿಂದಿನ ಹುದ್ದೆ ನೀಡಬೇಕೆಂದು ಆಗ್ರಹಿಸಿದರು.
ಒಕ್ಕೂಟದ ಕಾರ್ಯಾಧ್ಯಕ್ಷ ವಿ.ಎಸ್.ಶಿವಶಂಕರ್ ಮಾತನಾಡಿ, ಮೂಲತಃ ಅಖಂಡ ಬಳ್ಳಾರಿ ಜಿಲ್ಲೆಯವರಾದ ಐಪಿಎಸ್ ಅಧಿಕಾರಿ ದಯಾನಂದ ಬೆಂಗಳೂರಿನ ಪೊಲೀಸ್ ಆಯುಕ್ತರಾದ ನಂತರ ರೌಡಿಗಳನ್ನು ಮಟ್ಟ ಹಾಕಿದ್ದಾರೆ. ಭ್ರಷ್ಟಾಚಾರ ನಿಯಂತ್ರಿಸಿದ್ದಾರೆ. ಸಮಾಜ ಘಾತುಕ ಶಕ್ತಿಗಳಿಗೆ ಕಡಿವಾಣ ಹಾಕಿದ್ದಾರೆ, ಅವರ ಅಮಾನತು ಅನ್ಯಾಯಕರವಾದುದು, ಹೀಗಾಗಿ ಸರ್ಕಾರ ಅವರನ್ನು ತಕ್ಷಣ ಕೆಲಸಕ್ಕೆ ತೆಗೆದು ಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಕೆ. ಹನುಮಂತಪ್ಪ, ಜಿಲ್ಲಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಮಾಮ್ ಗೋಡೆಕಾರ, ಸಂಘಟನಾ ಕಾರ್ಯದರ್ಶಿ ಸಂಗನಕಲ್ಲು ವಿಜಯ್, ವಿ.ಕೆ. ಬಸಪ್ಪ, ಎನ್.ಕೆ. ಸದಾಶಿವಪ್ಪ, ಬಿ. ಶ್ರೀನಿವಾಸ್ ಮೂರ್ತಿ, ಧನಂಜಯ ಹಮಾಲ್, ಯರಗುಡಿ ಮಲ್ಲಯ್ಯ, ಕೆ.ಕೆ.ಹಾಳ್ ಸತ್ಯನಾರಾಯಣ, ಹಗರಿ ಜನಾರ್ಧನ, ಪುಷ್ಪ, ಕಲಾವತಿ, ಮಲ್ಲೇಶ್ವರಿ,ಗಡ್ಡಂ ತಿಮ್ಮಪ್ಪ, ಬಿ.ಮಲ್ಲಿಕಾರ್ಜುನ, ಅಸುಂಡಿ ಹನುಮೇಶ್, ಅತಾವುಲ್ಲಾ, ಸಂಗನಕಲ್ ಲಿಂಗರಾಜ್, ಸಂಗನಕಲ್ ಜೋಗಿನ ವಿಜಯಕುಮಾರ್, ಹವಂಭಾವಿ ಗಂಗಾಧರ, ಟಿ.ಗಂಗಪ್ಪ, ಶಂಕರ್, ಅಂಜಿನಪ್ಪ ಎಚ್.ಕೆ, ರಮೇಶ್, ಎರಿಸ್ವಾಮಿ, ವೈ ರವೀಂದ್ರ ನೆಟ್ಟೆಕಲ್ಲಪ್ಪ, ಕುಸುಮ, ರವಿಕುಮಾರ್ ಸಂಗನಕಲ್, ದೇವಿನಗರ ಬೀಮಲಿಂಗ, ಉಮೇಶ್, ಕೆ.ಎರ್ರಿಸ್ವಾಮಿ, ರಾಮು ನಾಯಕ್, ಬೆಳಗಲ್ ಹುಲುಗಪ್ಪ, ಬೆಳಗಲ್ ಜಂಬುನಾಥ, ಮರಿಸ್ವಾಮಿಮಠ ವಸಂತ್ ಕುಮಾರ್, ಎಚ್.ಹಳ್ಳಪ್ಪ, ಸಂಗನಕಲ್ಲು ದಿವಾಕರ್, ಯರಗುಡಿ ರಮೇಶ ಮತ್ತಿತರರು ಹಾಜರಿದ್ದರು.