ಬಳ್ಳಾರಿಯಲ್ಲಿ ಪತ್ರಿಕಾ ದಿನಾಚರಣೆ: ಪತ್ರಕರ್ತರು ಸಂವಿಧಾನದ ಮೌಲ್ಯಗಳನ್ನು ಬೆಸೆಯುವ ನೇಕಾರರಾಗಬೇಕಿದೆ -ಸಿ.ಎಂ. ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್

ಬಳ್ಳಾರಿ ಜು 7: ನಮ್ಮ ಸಂವಿಧಾನ ಪ್ರತ್ಯೇಕವಾಗಿ “ಪತ್ರಿಕಾ ಸ್ವಾತಂತ್ರ್ಯ” ಕೊಟ್ಟಿಲ್ಲ. ವಾಕ್ ಸ್ವಾತಂತ್ರ್ಯವೇ ಪತ್ರಿಕಾ ಸ್ವಾತಂತ್ರ್ಯವಾಗಿದೆ. ಹೀಗಾಗಿ ಸಂವಿಧಾನ ಉಳಿದರೆ ಮಾತ್ರ ಪತ್ರಿಕಾ ಸ್ವಾತಂತ್ರ್ಯವೂ ಉಳಿಯುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.

ರಾಜ್ಯ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಪತ್ರಿಕಾ ದಿನವನ್ನು ಸಂಭ್ರಮದಿಂದ ಆಚರಿಸುತ್ತಿರುವ ಹೊತ್ತಿನಲ್ಲೇ ನಮ್ಮ ಮಾಧ್ಯಮಗಳ ನೆತ್ತಿ ಮೇಲೆ ತೂಗುತ್ತಿರುವ ಕತ್ತಿಯ ಬಗ್ಗೆಯೂ ನಾವು ಗಂಭೀರವಾಗಿ ಯೋಚಿಸಬೇಕಿದೆ ಎಂದು ಗಮನ ಸೆಳೆದರು.

ಮಾಧ್ಯಮಗಳ ಅಸ್ತಿತ್ವ ಉಳಿದಿರುವುದೇ ಪತ್ರಿಕಾ ಸ್ವಾತಂತ್ರ್ಯದಿಂದ. ಈಗ ಪತ್ರಿಕಾ ಸ್ವಾತಂತ್ರ್ಯ ಬಹಳ ಅಪಾಯದಲ್ಲಿದೆ. 2024ರ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತ 181 ದೇಶಗಳ ಪೈಕಿ 151 ನೇ ಸ್ಥಾನದಲ್ಲಿದೆ ಎಂದು ಭಾನುವಾರ ತುಮಕೂರಿನಲ್ಲಿ  ಹೇಳಿದ್ದೆ. ಆದರೆ, ನಾವು ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಪತ್ರಿಕಾ ಸ್ವಾತಂತ್ರ್ಯದ ಕುಸಿತದ ಜೊತೆಗೇ ವಾಕ್ ಸ್ವಾತಂತ್ರ್ಯದ ಸೂಚ್ಯಂಕದಲ್ಲೂ ಭಾರತ 109ನೇ ಸ್ಥಾನಕ್ಕೆ ಕುಸಿದಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಈ ಕುಸಿತಗಳ ಬಗ್ಗೆ ನಾವು ಪತ್ರಕರ್ತರು ಗಂಭೀರವಾಗಿ ಯೋಚಿಸಬೇಕಿದೆ ಎಂದು ಹೇಳಿದರು.

ಭಾರತೀಯ ಪತ್ರಿಕೋದ್ಯಮಕ್ಕೆ ಬಹಳ ಉನ್ನತವಾದ ಚರಿತ್ರೆ ಇದೆ. ಸ್ವಾತಂತ್ರ್ಯ ಹೋರಾಟದಿಂದ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವವರೆಗೂ ಮಹತ್ವದ ಪಾತ್ರ ನಿರ್ವಹಿಸಿರುವುದನ್ನು ಚರಿತ್ರೆಯುದ್ದಕ್ಕೂ ಕಾಣುತ್ತೇವೆ ಎಂದರು.

ಭಾರತದ ಮೊದಲ ಪತ್ರಿಕೆ ಎಂದು ಹೇಳಲಾಗುವ “ಬೆಂಗಾಲ್ ಗೆಜೆಟ್” ಕೂಡ ಬ್ರಿಟೀಷರು ಹೇಗೆ ಭಾರತೀಯ ಸಮಾಜವನ್ನು ವಿಭಜಿಸುತ್ತಿದ್ದಾರೆ ಎನ್ನುವುದನ್ನು ಗಟ್ಟಿಧ್ವನಿಯಲ್ಲಿ ಹೇಳುವ ಮತ್ತು ಖಂಡಿಸುವ ಮೂಲಕವೇ ಹೆಚ್ಚು ಜನಪ್ರಿಯವಾಯಿತು ಎಂದು ಹೇಳಿದರು.

ಬಳಿಕ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಗಾಂಧಿ, ಭಗತ್ ಸಿಂಗ್, ಅಂಬೇಡ್ಕರ್, ಗಂಗಾಧರನಾಥ ತಿಲಕ್ ಅವರೂ ಆರಂಭಿಸಿದ ಪತ್ರಿಕೆಗಳು ಬೇರೆ ಬೇರೆ ಧ್ವನಿಯಲ್ಲಿ ಭಾರತವನ್ನು ಒಗ್ಗೂಡಿಸುವ ಕೆಲಸವನ್ನು ಮಾಡಿವೆ. ಎಂದು ಶ್ಲಾಘಿಸಿದರು.

ಭಾರತೀಯ ಪತ್ರಿಕಾ ಪರಂಪರೆಗೆ ಸ್ವಾತಂತ್ರ್ಯ ಹೋರಾಟವನ್ನು ಕಟ್ಟಿದ ಚರಿತ್ರೆ ಇರುವಂತೆಯೇ, ಭಾರತವನ್ನು ಜಾತ್ಯತೀತ, ಧರ್ಮಾತೀತವಾಗಿ ಒಗ್ಗಟ್ಟಾಗಿ ನಿಲ್ಲಿಸಿದ ಹೆಮ್ಮೆ ಕೂಡ ಇದೆ. ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ಸ್ವಾತಂತ್ರ್ಯ ಹೊಸ್ತಿಲಿನ ಪತ್ರಿಕೋದ್ಯಮಕ್ಕೆ “ಆದಾಯದ ಬಡತನ” ಇತ್ತೇ ಹೊರತು “ಸತ್ಯದ ಬಡತನ” ಇರಲಿಲ್ಲ ಎಂದು ವಿವರಿಸಿದರು.

ಆದಾಯದ ಬಡತನದಲ್ಲಿದ್ದ ಪತ್ರಿಕೆಗಳು ಸತ್ಯದ ಶ್ರೀಮಂತಿಕೆ ಹೊಂದಿದ್ದ ಕಾರಣಕ್ಕೆ ದೇಶದ ಜನರೇ ಅಂತಹ ಪತ್ರಿಕೆಗಳನ್ನು ಉಳಿಸಿ ಬೆಳೆಸಿದ್ದನ್ನು ಅಂಬೇಡ್ಕರ್ ಮತ್ತು ಮಹಾತ್ಮಗಾಂಧಿಯವರೂ ಹೇಳಿದ್ದಾರೆ. ಇವರ ಬಳಿ ಹಣಕ್ಕೆ ಬಡತನ‌ ಇತ್ತು, ಸತ್ಯಕ್ಕೆ ಬಡತನ ಇರಲಿಲ್ಲ ಎಂದು ವಿವರಿಸಿದ ಅವರು  ಪ್ರಸ್ತುತ  ಯದ ಬಡತನದಿಂದ ಮೇಲೆ ಬಂದಿರುವ ಮಾಧ್ಯಮ ಕ್ಷೇತ್ರ ಸತ್ಯದ ಬಡತನದ ಕಾರಣಕ್ಕೆ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ. ಕೋವಿಡ್ ಸಂದರ್ಭದಲ್ಲಿ ಮತ್ತು ನೋಟು ನಿಷೇಧದ ಸಂದರ್ಭದಲ್ಲಿ ಪತ್ರಿಕೆ ಮತ್ತು ಚಾನಲ್ ಗಳ ಆದಾಯಕ್ಕೆ ಬಹಳ ಪೆಟ್ಟು ಬಿದ್ದಿತ್ತು. ಈ ಆಘಾತದಿಂದ ಮಾಧ್ಯಮಗಳು ಮೂರೇ ವರ್ಷದಲ್ಲಿ ಮೇಲೆ ಬಂದವು. ಆದರೆ, ಸತ್ಯದ ಬಡತನವನ್ನು ನಮ್ಮ ಮಾಧ್ಯಮ ಕ್ಷೇತ್ರ ತೀವ್ರವಾಗಿ ಅನುಭವಿಸುತ್ತಿದೆ. ಈ ಕಾರಣಕ್ಕೇ “Fact Check” ಮಾಡುವ ಪರಿಸ್ಥಿತಿ ಬಂದಿದೆ ಎಂದರು.

ಕೆಲವು ಮಾಧ್ಯಮ‌ ಸಂಸ್ಥೆಗಳೂ ಮತ್ತು ಸರ್ಕಾರ ಕೂಡ Fact Check ಆರಂಭಿಸುವ ಪರಿಸ್ಥಿತಿ ಬಂದಿದೆ ಎಂದರೆ ಸುಳ್ಳುಗಳಿಂದ ಸತ್ಯವನ್ನು ಹುಡುಕುವುದೂ ಈಗ ಒಂದು ಕೆಲಸ ಆಗಿದೆ ಅಂತಲೇ ಅರ್ಥ. ಇದು ಇವತ್ತಿನ‌ ಮಾಧ್ಯಮ ರಂಗ ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿರುವುದರ ಉದಾಹರಣೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಪತ್ರಕರ್ತರು ಸತ್ಯವನ್ನು ಮತ್ತು ಸಂವಿಧಾನದ ಮೌಲ್ಯಗಳನ್ನು ಮತ್ತೆ ಬೆಸೆಯುವ ನೇಕಾರರ ರೀತಿ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

ನಮ್ಮ ಸಂವಿಧಾನದಿಂದ “ಜಾತ್ಯತೀತ” ಮತ್ತು “ಸಮಾಜವಾದ” ಎನ್ನುವ ಮೌಲ್ಯಗಳನ್ನು ಕಿತ್ತು ಹಾಕಬೇಕು ಎನ್ನುವ ವ್ಯವಸ್ಥಿತ ಷಡ್ಯಂತ್ರ ಶುರುವಾಗಿದೆ. ಇವೆರಡೂ ಮೌಲ್ಯಗಳು ನಮ್ಮ ಸಂವಿಧಾನದ ಪ್ರಾಣವಾಯು. ಮಾಧ್ಯಮಗಳು ಈ ಪ್ರಾಣವಾಯುವನ್ನು ಉಳಿಸುವ ವಿಚಾರದಲ್ಲಿ ಗಟ್ಟಿಯಾಗಿ ನಿಲ್ಲುವ ಮೂಲಕ ಭಾರತದ ಜಾತ್ಯತೀತ ಮತ್ತು ಸಮಾಜವಾದಿ ಬೆಸುಗೆ ಹರಿಯದಂತೆ ಕಾಪಾಡಿಕೊಳ್ಳುವ ನೇಕಾರರಾಗಬೇಕಿದೆ ಎಂದು ಕೆ.ವಿ.ಪ್ರಭಾಕರ್ ತಿಳಿಸಿದರು.                                    ವಿಶೇಷ ಉಪನ್ಯಾಸ: ದಾವಣಗೆರೆ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್ ಕಣಸೋಗಿ‌ ವಿಶೇಷ ಉಪನ್ಯಾಸ ನೀಡಿದರು.

ಕರ್ನಾಟಕ ಕಾರ್ಯನಿರತ‌ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು,, ವಸತಿ ಸಚಿವರ ಮಾಧ್ಯಮ‌ ಸಲಹೆಗಾರರಾದ ಲಕ್ಷ್ಮೀನಾರಾಯಣ್, ಮಹಾನಗರ ಪಾಲಿಕೆ ಮೇಯರ್ ನಂದೀಶ್ ಮುಲ್ಲಂಗಿ ಮಾತನಾಡಿದರು.  ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಜಿಲ್ಲಾ ಎಸ್ಪಿ ಡಾ. ಶೋಭರಾಣಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ‌ ನಿರ್ದೇಶಕ ಬಿವಿ. ತುಕಾರಾಂ,  ನಿರ್ದೇಶಕ ಕೆಯುಡ್ಬ್ಯುಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ , ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೆರಗೋಡು, ಜಿಲ್ಲಾ ಅಡಹಾಕ್ ಸಮಿತಿ ಸದಸ್ಯರಾದ ಮೋಕ‌ಮಲ್ಲಯ್ಯ, ವೆಂಕೋಬಿ ಸಂಗನಕಲ್ಲು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಪತ್ರಕರ್ತ ಎನ್. ವೀರಭದ್ರಗೌಡ ಸ್ವಾಗತಿಸಿದರು. ಪತ್ರಕರ್ತ ಶಶಿಧರ ಮೇಟಿ ನಿರೂಪಿಸಿದರು. ಪತ್ರಕರ್ತರಾದ ಕೆ.‌ಎಂ ಮಂಜುನಾಥ್, ಪುರುಷೋತ್ತಮ ಹಂದ್ಯಾಳ್, ಹುಲುಗಣ್ಣ, ತಿಮ್ಮಪ್ಪ ಚೌಧರಿ ಮತ್ತಿತರರು ನಿರ್ವಹಿಸಿದರು. ಯುವ ಗಾಯಕಿ ಶೃತಿ ಹಂದ್ಯಾಳ್ ಪ್ರಾರ್ಥಿಸಿದರು.