ಅನುದಿನ ಕವನ-೧೭೭೫, ಕವಿ: ಡಾ. ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ಗಜಲ್

ಗಜಲ್

ಸೋಕಿತು ಒಲವ ತಂಗಾಳಿಯ ಅಲೆಯು ಈ ದಿನ
ನಿನ್ನಿಂದ ಬಾಳಿಗೆ ಪ್ರೀತಿಯ ಹೊಳೆಯು ಈ ದಿನ

ಮಧುರ ಯಾನದ ಪ್ರತಿ ಪುಟವು ಬಣ್ಣದ ಹಾಡು
ಕದಪು ತುಂಬ ಖುಷಿಯ ಕಳೆಯು ಈ ದಿನ

ಸೀಳ್ಳೆ ಹಾಕುತ ಕಂಪು ಬೀರಿದೆ ಸಂಪಿಗೆ
ಕಲ್ಲೆದೆ ಕರಗುವ ಸಲಿಗೆಯ ಮಳೆಯು ಈ ದಿನ

ತವಕಗಳ ಮರೆಸಿದೆ ಹೊಳೆವ ಬಿಸಿಲಕೋಲು
ಕಣ್ಣು ಮಿಟುಕಿಸಿದೆ ನಲ್ಮೆಯ ಇಳೆಯು ಈ ದಿನ

ಇಣುಕಿ ನೋಡಿದರೂ ಸುಳಿಯದ ಏಕಾಂತದ ಪಾಡು
‘ದಿನ್ನಿ’ಗೂ ಅರಿವಾಯಿತು ಒಲುಮೆಯ ಬೆಲೆಯು ಈ ದಿನ


-ಡಾ. ದಸ್ತಗೀರಸಾಬ್ ದಿನ್ನಿ, ಬಳ್ಳಾರಿ
(ಮಧು ಬಟ್ಟಲಿನ ಗುಟುಕು -ಕವನ ಸಂಕಲನದಿಂದ)