ಅನುದಿನ ಕವನ-೫

ಅಕ್ಷರದವ್ವನ ಹುಟ್ಟುಹಬ್ಬ

ನಾಲಿಗೆ ಮೇಲೆ
ನಾಯಿ ಬಾಲ ಬರೆಯುತ್ತಿದ್ದದ್ದನ್ನೆ
ಶಿಕ್ಷಣ
ಎಂದುಕೊಂಡಿದ್ದ ವ್ಯವಸ್ಥೆಗೆ
ಎಬಿಸಿಡಿ ಕಲಿಸುವ
ಶಾಲೆಗಳನ್ನು ತೆರೆದವರು
ಅವ್ವ ಸಾವಿತ್ರವ್ವ

ಮನು ತಂದಿಟ್ಟ ಕಾನೂನಿಂದ
ಶತಶತಮಾನಗಳವರೆಗೆ
ಅಕ್ಷರ ವಂಚಿತರಾದ ಕಂದಮ್ಮಗಳಿಗೆ
ಅಕ್ಷರಗಳ ತಿದ್ದಿತೀಡಿಸಿದವರು
ಅವ್ವ ಸಾವಿತ್ರವ್ವ

ಕಲ್ಲು ಹೊಡೆಯುತ್ತಿದ್ದರು
ಬೆದರದೆ
ಸೆಗಣಿ ಎರಚುತ್ತಿದ್ದರೂ
ಧೃತಿಗೆಡದೆ
ಪತಿಯೊಡನೆ
ಶೂದ್ರಾತಿಶೂದ್ರರ ಎದೆಗೆ
ಅಕ್ಷರದ ಜ್ಯೋತಿ ಹಚ್ಚಿದವರು
ಅವ್ವ ಸಾವಿತ್ರವ್ವ

ಜನವರಿ 3
ಅವ್ವನ ಹುಟ್ಟುಹಬ್ಬ
ನಮಿಸಲಿ
ಸಕಲ ಭಾರತೀಯರು
ಜ್ಯೋತಿಬಾಫುಲೆಯ ಈ ಧೀರ ಸತಿಗೆ
ಅಕ್ಷರದ ಎದೆಯ ಹಾಲುಣಿಸಿದ ಮೊಟ್ಟಮೊದಲ
ಶಿಕ್ಷಕಿಗೆ
ಮಾತೆ ಸಾವಿತ್ರಿಬಾಫುಲೆಯವರಿಗೆ.

-ರಘೋತ್ತಮ ಹೊ.ಬ,

Leave a Reply

Your email address will not be published. Required fields are marked *