ಬಳ್ಳಾರಿ, ಜೂ.1: ವಿದ್ಯಾರ್ಥಿಗಳು ಸಣ್ಣ ಅವಕಾಶ, ಸಹಕಾರವನ್ನೇ ಬಳಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನ ಪಡೆದುಕೊಳ್ಳಿ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಕುಲಸಚಿವ ಎಸ್.ಎನ್.ರುದ್ರೇಶ್ ಅವರು ತಿಳಿಸಿದರು.
ಅವರು ಭಾನುವಾರ ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ 2025 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂದ ಮುಖ್ಯ ಅತಿಥಿಗಳಾಗಿ ಮಾತನಾಡಿದರು..
ಡಾ. ಅಂಬೇಡ್ಕರ್ ಅವರಿಗೆ ಛತ್ರಪತಿ ಶಾಹು ಮಹಾರಾಜರು ಮಾಡಿದ ಸಹಾಯದಿಂದ ಈ ದೇಶದ ಸಂವಿಧಾನ ರಚನೆಯ ಮಹಾನ್ ವ್ಯಕ್ತಿಯಾದರು. ನಾನು ಸಹ ಕೂಲಿ ಮಾಡಿಕೊಂಡು ಬದುಕಿದಾತ, ನಮ್ಮೂರಿನ ಬಸವೇಗೌಡ ಅವರು ನೀಡಿದ ಆರ್ಥಿಕ ಸಹಕಾರದಿಂದ ನಾನು ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆ ಪಡೆಯಲು ಸಹಕಾರಿಯಾಯ್ತು ಎಂದು ಸ್ಮರಿಸಿದರು.
ವಿದ್ಯಾಭ್ಯಾಸದ ಸಂಧರ್ಭದಲ್ಲಿ ದೊರೆಯುವ ಚಿಕ್ಕ ಮೊತ್ತವೂ ಪ್ರೋತ್ಸಾಹದಾಯಕವಾದುದು ಎಂದು ಅರಿತು ಮತ್ತಷ್ಟು ಸಾಧನೆಗೆ ಮುಂದಾಗಿ ಎಂದು ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪತ್ರಕರ್ತರ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯ ಶ್ಲಾಘನೀಯ ಎಂದ ಅವರು, ಸಣ್ಣ ಮೆಟ್ಟಿಲು ಏರುತ್ತಲೇ ದೊಡ್ಡ ಸ್ಥಾನಕ್ಕೆ ಹೋಗಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಜಾತಿಯತೆ ಮಾಡಿ, ಅಂದರೆ ನಿಮ್ಮದೇ ಜಾತಿಯ ಬಡಜನರ ವಿದ್ಯಾಭ್ಯಾಸಕ್ಕೆ ಸಹಕಾರ ಮಾಡಿ ಎಂದರು.
ಜೆ.ಕೆ.ಟ್ರಸ್ಟ್ ಮುಖ್ಯಸ್ಥ ಜೋಳದರಾಶಿ ತಿಮ್ಮಪ್ಪ ಮಾತನಾಡಿ ದುಡ್ಡಿಗೆ ದೊಡ್ಡಪ್ಪ ವಿದ್ಯೆ, ಕಳ್ಳತನ ಮಾಡದ್ದು ವಿದ್ಯೆ, ಅದಕ್ಕಾಗಿ ವಿದ್ಯಾರ್ಥಿಗಳ ಪುಸ್ಕಾರವೂ ಅವರ ಭವಿಷ್ಯಕ್ಕೆ ಸಹಕಾರಿಯಾಗಲಿ. ನಮ್ಮ ಟ್ರಸ್ಟ್ ನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಮತ್ತು ಪೆನ್ನು ಪ್ಯಾಡ್ ನೀಡಿ ಸಹಕರಿಸುವ ಕಾರ್ಯಮಾಡುತ್ತಿದ್ದೇನೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ವೀರಭದ್ರಗೌಡ, ನಮ್ಮ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯಮಟ್ಟದ ಕಾರ್ಯಕ್ರಮ ಈ ತಿಂಗಳ 21 ರಂದು ಚಾಮರಾಜನಗರದ ಮಲೆ ಮಾದೇಶ್ವರ ಬೆಟ್ಟದ ದೇವಸ್ಥಾನದಲ್ಲಿ ನಡೆಯಲಿದೆಂದು ತಿಳಿಸಿದರು.
ವೇದಿಕೆಯಲ್ಲಿ ಪತ್ರಕರ್ತರ ಸಂಘದ ಅಡಾಕ್ ಸಮಿತಿ ಸದಸ್ಯ ಕೆ.ಮಲ್ಲಯ್ಯ ಇದ್ದರು. ವಿದ್ಯಾರ್ಥಿಗಳಾದ ಪಿ.ದಿವ್ಯಾಶ್ರೀ, ಕೆ.ಎಂ.ಕಾಂಚನಾ, ನಾಗಾಂಬಿಕ ಹೆಚ್.ಎಂ., ಪಿ.ಅಸ್ಮಿತ ಚೌದರಿ, ಸಂಡೂರಿನ ಕಾರ್ತಿಕ್ ಬಿ, ಸಂಜನಾ ಬಿ.ಬಿ, ಬಿ.ಹೇಮಂತಕುಮಾರ್, ಎಂ.ಯಶವಂತಕುಮಾರ್, ಕೆ.ಸಹನಾ ತೆಕ್ಕಲಕೋಟೆ ಇವರನ್ನು ಸನ್ಮಾನಿಸಿ ಗೌರವಿಸಲಾಯ್ತು.
ಮತ್ತೋರ್ವ ಸದಸ್ಯ ವೆಂಕೋಬಿ ಸಂಗನಕಲ್ಲು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ಸಂಘದ ಸದಸ್ಯ ಪತ್ರಕರ್ತರು, ವಿದ್ಯಾರ್ಥಿಗಳ ಪಾಲಕ ಪೋಷಕರು ಪಾಲ್ಗೊಂಡಿದ್ದರು.