ವಂದೇಕರ್ನಾಟಕ ಮಾಸಿಕ ವಾರ್ಷಿಕೋತ್ಸವ: ಪತ್ರಿಕೋದ್ಯಮ ನಿಂತ ನೀರಲ್ಲ -ಶಿವಾನಂದ ತಗಡೂರು

ಬೆಂಗಳೂರು, ಆ.15 : ಪತ್ರಿಕೋದ್ಯಮ ನಿಂತ ನೀರಾಗಬಾರದು. ಅದು ಲೋಕ ಸತ್ಯಾನ್ವೇಷಣೆಗೆ ನಿರಂತರ ಚಿಲುಮೆಯಾಗಬೇಕು ಎಂದು ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಭಿಪ್ರಾಯಪಟ್ಟರು.
ಶುಕ್ರವಾರಂದು ನಗರದಲ್ಲಿ ನಡೆದ ವಂದೇ ಕರ್ನಾಟಕ ದ್ವಿಭಾಷಿಕ ಮಾಸಪತ್ರಿಕೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.                                              ಪತ್ರಿಕಾ ಕಸಬು ಎಂದರೆ ಅದು ಹುಡುಗಾಟಿಕೆ ಅಲ್ಲ. ಪತ್ರಿಕೆಗಳನ್ನು ದೀರ್ಘಾವಧಿಗೆ ನಡೆಸುವುದೆಂದರೆ ಅದೊಂದು ಸಾಹಸ. ನೂತನ ವಿಚಾರಗಳನ್ನು ಓದುಗರಿಗೆ ತಲುಪಿಸಲು ಇಂದು ಕೇವಲ ದಿನಪತ್ರಿಕೆಗಳು ಮಾತ್ರ ಸೀಮಿತವಾಗಿಲ್ಲ. ವಾರ, ಪಾಕ್ಷಿಕ ಮತ್ತು ಮಾಸಿಕ ಪತ್ರಿಕೆಗಳೂ ಈ ದಿಶೆಯಲ್ಲಿ ಓದುಗ ಪ್ರಪಂಚಕ್ಕೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಲು ಸಾಧ್ಯವಿದೆ ಎಂದರು.                        ಈ ದಿಶೆಯಲ್ಲಿ ನಾಡಿನ ಪ್ರತಿಷ್ಟಿತ ದಿನಪ್ರತಿಕೆಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಲಿಂಗಯ್ಯ ಬಿ. ಕಾಡದೇವರಮಠ ಅವರ ಪತ್ರಿಕೋದ್ಯಮದ ಹಸಿವು ಮೆಚ್ಚುವಂತಹದು. ಇವರ ಸಾರಥ್ಯದಲ್ಲಿ ರೂಪುಗೊಂಡಿರುವ ವಂದೇ ಕರ್ನಾಟಕ ಮಾಸಿಕ ಪತ್ರಿಕೆಯು, ಭವಿಷ್ಯದಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಓದುಗ ಪ್ರಪಂಚದ ಮನಗೆಲ್ಲಲಿ ಎಂದು ತಗಡೂರು ಅವರು ಹಾರೈಸಿದರು.

ಬರಹದಿಂದ ಸಮಾಜಕ್ಕೆ ಒಳಿತಾಗಲಿ:
ರಾಜ್ಯದ ಮಾಹಿತಿ ಹಕ್ಕು ನಿರ್ದೇಶನಾಲಯದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು ಮಾತನಾಡಿ ಸಮಾಜಕ್ಕೆ ಒಳಿತಾಗುವ ಮತ್ತು ಉಪಯುಕ್ತಕರ ವಿಷಯಗಳನ್ನು ಅರ್ಥಪೂರ್ಣ ಲೇಖನ ಮತ್ತು ವಿಶ್ಲೇಷಣೆಗಳನ್ನು ಪ್ರಕಟಿಸುವ ಮೂಲಕ ವಂದೇ ಕರ್ನಾಟಕ ಮಾಸಿಕ ಪತ್ರಿಕೆಯು, ಓದುಗ ಪ್ರಪಂಚದ ಮನೆಮಾತಾಗಿ ಮಾರ್ಧನಿಸಲಿ ಎಂದು ಆಶಿಸಿದರು.                      ಹಿರಿಯ ಪತ್ರಕರ್ತರಾದ ಆರ್. ಪಿ. ಜಗದೀಶ್ ಅವರು ಮಾತನಾಡಿ ಮಾಸಿಕ ಪತ್ರಿಕೆ ಭವಿಷ್ಯದಲ್ಲಿ ಉತ್ತಮ ಸಂಚಿಕೆಯಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು. ಹಿರಿಯ ಕಾಂಗ್ರೆಸ್ ಮುಖಂಡ ಎಲ್. ಆರ್. ಅನಂತ್ ಅವರೂ ಮಾತನಾಡಿದರು.
ಇದೇ ವೇಳೆ ಮೊದಲನೆಯ ವಾರ್ಷಿಕೋತ್ಸವ ನಿಮಿತ್ತ ವಂದೇ ಕರ್ನಾಟಕ ವಿಶೇಷ ಸಂಚಿಕೆ ಲೋಕಾರ್ಪಣೆಗೊಂಡಿತು. ಲಿಂಗಯ್ಯ ಬಿ. ಕಾಡದೇವರ ಮಠ ಸ್ವಾಗತಿಸಿದರು.