ಶಂಕರಘಟ್ಟ(ಕುವೆಂಪು ವಿವಿ), ನ.1: ಆಡು ಭಾಷೆಯಲ್ಲಿ ಕಲಿಯದೆ ಹೋದರೆ ಕಲಿಕೆ ಕುಂಠಿತವಾಗುತ್ತದೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅನನ್ಯವಾದ ಇತಿಹಾಸ ಪರಂಪರೆ ಇದೆ. ಇಪ್ಪತ್ತನೇ ಶತಮಾನದಲ್ಲಿ ಕನ್ನಡ ವೈಚಾರಿಕತೆ ಮತ್ತು ವೈಜ್ಷಾನಿಕ ಕ್ಷೇತ್ರದಲ್ಲಿ ಮೊದಲನೇ ಸ್ಥಾನವನ್ನುಗಳಿಸಿದೆ. ಕನ್ನಡ ನೆಲ ಜಲ ಭಾಷೆ ಜನತೆಗಾಗಿ ಶ್ರಮಿಸಿದ ಶ್ರೀಸಾಮನ್ಯರಿಂದ ಮೊದಲುಗೊಂಡು ರಾಜಮಹಾರಾಜರು, ಕವಿಗಳು, ಸಂಸ್ಕೃತಿಚಿಂತಕರು, ಸುಧಾರಕರು, ವಿಜ್ಞಾನಿಗಳನ್ನು ಸ್ಮರಿಸುವ ಮೂಲಕ ಅವರ ಸಾಧನೆಗಳನ್ನು ಅನುಸರಿಸುವ ಮೂಲಕ ಕನ್ನಡ ನಾಡು ನುಡಿಯನ್ನು ಸದೃಢವಾಗಿ ಕಟ್ಟೋಣ. ಇಲ್ಲಿನ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆಧ್ಯಾತ್ಮಿಕ ಕ್ಷೇತ್ರಗಳ ಸಾಧನೆಗಳಿಂದ ವಿಶಿಷ್ಟ ರಾಜ್ಯ ಕರ್ನಾಟಕ ಎಂದು ಕುಲಪತಿಗಳಾದ ಪ್ರೊ. ಶರತ್ ಅನಂತಮೂರ್ತಿ ಅವರು ಅಭಿಪ್ರಾಯಪಟ್ಟರು.
ಅವರು ಕುವೆಂಪು ವಿಶ್ವವಿದ್ಯಾಲಯದ ಹಿರೇಮಠ ಸಭಾಂಗಣದಲ್ಲಿ ಏರ್ಪಡಿಸಿದ್ದ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಆರ್ ತಿಮ್ಮರಾಯಪ್ಪ ನವರು ಮಾತಾನಾಡಿ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಕನ್ನಡ ಎರಡನೇ ಸ್ಥಾನ ಪಡೆದಿದೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳಾದ ಕುವೆಂಪು, ವಿ.ಕೃ.ಗೋಕಾಕ್, ಚಂದ್ರಶೇಖರ ಕಂಬಾರ, ಅನಂತಮೂರ್ತಿ ಮೂದಲಾದವರು ಕನ್ನಡ ನಾಡು ನುಡಿ ಬೆಳಸುವಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಮಾತೃ ಭಾಷೆ ಬಗ್ಗೆ ಆಸಕ್ತಿ ಇರಬೇಕು. ಮುಂದಿನ ಪೀಳಿಗೆೆಯು ಕನ್ನಡ ಭಾಷೆಯನ್ನ ಶ್ರೀಮಂತಗೊಳಿಸುವಂತಾಗಬೇಕೆಂದರು.
ಕನ್ನಡ ನಾಡು ನುಡಿಯ ವೈಶಿಷ್ಟತೆಯನ್ನು ಕುರಿತು ಹಿರಿಯ ಪ್ರಾಧ್ಯಾಪಕರಾದ ಪ್ರಶಾಂತ ನಾಯಕ ಅವರು ಮಾತನಾಡಿದರು. ಕನ್ನಡಭಾರತಿ ನಿರ್ದೇಶಕರಾದ ಪ್ರೊ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ರೀಯಾ ಆಯೇಷಾ ಮತ್ತು ತಂಡ ನಾಡಗೀತೆಯನ್ನು ಹಾಡಿದರು. ಶ್ರೀಧರ ಸ್ವಾಗತಿಸಿದರು, ರಘು ವಂದಿಸಿದರು, ಶಿಲ್ಪಕಲಾ ನಿರೂಪಿಸಿದರು. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ಜರುಗಿದವು.
