
ಬಳ್ಳಾರಿ,ನ.20: ನಗರದ ಹೃದಯಭಾಗದಲ್ಲಿರುವ ಮತ್ತು ಅತಿಹೆಚ್ಚು ವಿದ್ಯಾರ್ಥಿಗಳ ಪ್ರವೇಶಾತಿ ಹೊಂದಿದ ಕಾಲೇಜು ಎಂಬ ಖ್ಯಾತಿ ಪಡೆದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ (ಎಸ್ ಎಸ್ ಎ) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿದಿನ ತರಗತಿ ಆರಂಭಕ್ಕೂ ಮುನ್ನ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಭಾರತ ಸಂವಿಧಾನದ ಪ್ರಸ್ತಾವನೆ ಭೋದಿಸಲಾಗುತ್ತಿದೆ.
ಪ್ರತಿದಿನ (ರಜೆದಿನ ಹೊರತುಪಡಿಸಿ) ಬೆಳಿಗ್ಗೆ 9 ರಿಂದ ಮಧ್ಯಾಹ್ನ 01.30 ರ ವರೆಗೆ, ವಿಜ್ಞಾನ ವಿಭಾಗಗಳು ಒಳಗೊಂಡಂತೆ ಸಂಜೆ 4 ಗಂಟೆಯವರೆಗೆ ತರಗತಿ ನಡೆಯಲಿವೆ. ತರಗತಿ ಆರಂಭಕ್ಕೂ ಮುನ್ನ ಬೆಳಗಿನ ಪ್ರಾರ್ಥನಾ ಸಮಯದಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಪ್ರಾಂಶುಪಾಲರು, ಉಪನ್ಯಾಸಕರು, ಅತಿಥಿ ಉಪನ್ಯಾಸಕರು ಮತ್ತು ಎಲ್ಲಾ ಅಧಿಕಾರಿ, ಸಿಬ್ಬಂದಿ ಹಾಗೂ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ತಪ್ಪದೇ ಭಾರತ ಸಂವಿಧಾನದ ಪ್ರಸ್ತಾವನೆವನ್ನು ಪಠಿಸುತ್ತಾರೆ.

‘ಸಂವಿಧಾನ ಪ್ರಸ್ತಾವನೆಯಲ್ಲಿ ನಮೂದಿಸಲಾದ ತತ್ವಗಳನ್ನು ಎಲ್ಲಾ ವಿದ್ಯಾರ್ಥಿಗಳು ಅಳವಡಿಸಿಕೊಂಡು ಅಂತರ್ಗತಗೊಳಿಸಿದಾಗ ಮಾತ್ರ ಸಂವಿಧಾನದ ಉದ್ದೇಶಗಳನ್ನು ಸಾಧಿಸಲು ಸಾಧ್ಯವಾಗುತ್ತದೆ’ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಪ್ರಹ್ಲಾದ್ ಚೌಧರಿ ಹೇಳಿದರು.
—–
