
ಗದಗ, ನ.25:ನಗರದ ಜಿಲ್ಲಾಡಳಿತ ಭವನದ ಮುಂದೆ ಮಂಗಳವಾರ ಕರ್ನಾಟಕ ಸರಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ಸೇವಾ ಭದ್ರತೆಗಾಗಿ ಆಗ್ರಹಿಸಿ ಸಾವಿರಾರು ಅತಿಥಿ ಉಪನ್ಯಾಸಕರು ಅನಿರ್ದಿಷ್ಠಾವಧಿ ಪ್ರತಿಭಟನೆ ಆರಂಭಿಸಿದರು.
ಪ್ರತಿಭಟನಾ ಸ್ಥಳಕ್ಕೆ ಗದಗಿನ ತೋಂಟದಾರ್ಯ ಮಠದ ಶ್ರೀಗಳಾದ ಡಾ. ಸಿದ್ದಲಿಂಗ ಮಹಾಸ್ವಾಮಿಗಳು ಮತ್ತು ಶಾಸಕ ಸಂಕನೂರು ಆಗಮಿಸಿ ಅತಿಥಿ ಉಪನ್ಯಾಸಕರ ನ್ಯಾಯಸಮ್ಮತ ಬೇಡಿಕೆಗಳನ್ನು ಸರಕಾರ ಶೀಘ್ರ ಈಡೇರಿಸಬೇಕು ಈ ಪ್ರತಿಭಟನೆಗೆ ಮಠಾಧೀಶರೆಲ್ಲರ ಬೆಂಬಲವಿದೆ ಎಂದು ಅಭಯಹಸ್ತ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಡಾ. ಕಲ್ಮನಿ ಉನ್ನತಶಿಕ್ಷಣ ಇಲಾಖೆಯ ದ್ವಂದ್ವ ನೀತಿ ಈ ಗೊಂದಲಕ್ಕೆಲ್ಲ ಕಾರಣವಾಗಿದೆ ಎಂದು ದೂರಿದರು.

ಯು,ಜಿ,ಸಿ-ನಾನ್ ಯುಜಿಸಿ,ಎಂಬ ಭೇದಭಾವ ಮಾಡದೆ ಎಲ್ಲ ಅತಿಥಿ ಉಪನ್ಯಾಸಕರನ್ನೂ ಈ ಮೊದಲಿನಂತೆ ಮುಂದುವರೆಸಿ ಉದ್ಯೋಗ ಭದ್ರತೆ ನೀಡಿ ಸಾವಿರಾರು ಅತಿಥಿ ಉಪನ್ಯಾಸಕರ ಕುಟುಂಬಗಳು ಬೀದಿಗೆ ಬರುವುದನ್ನು ತಡೆಯಬೇಕು ಎಂದು ಆಗ್ರಹಿಸಿದ ಅವರು ಬೇಡಿಕೆ ಈಡೇರದಿದ್ದರೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲೂ ಉಗ್ರ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮನನೊಂದ ಅತಿಥಿ ಉಪನ್ಯಾಸಕರೊಬ್ಬರು ಪೆಟ್ರೋಲ್ ಸುರಿದು ಕೊಂಡು ಆತ್ಮಹತ್ಯ ಮಾಡಿಕೊಳ್ಳಲು ಯತ್ನಿಸಿದರು, ಆಗ ಅಧ್ಯಕ್ಷರು,ಉಪನ್ಯಾಸಕರು,ಪೊಲೀಸರು ಆಗಮಿಸಿ ಆಗಬಹುದಾಗಿದ್ದ ಅನಾಹುತವನ್ನು ತಡೆದರು.
ಸರಕಾರದ ಈ ನೀತಿ ಮುಂದುವರೆದರೆ ಅತಿಥಿ ಉಪನ್ಯಾಸಕರ ಸರಣಿ ಆತ್ಮಹತ್ಯಯೇ ನಡೆಯುತ್ತದೆ. ಎರಡು ದಶಕಗಳ ಕಾಲ ದುಡಿಸಿಕೊಂಡು ಈಗ ಏಕಾಏಕಿ ಬೀದಿಗೆ ಬಿಟ್ಟರೆ ಅವರನ್ನೇ ನಂಬಿದ ಕುಟುಂಬದ ಗತಿಯೇನೆಂದು ಉಪನ್ಯಾಸಕರು ಪ್ರಶ್ನಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಮಹಿಳಾ ಉಪನ್ಯಾಸಕಿಯರೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ, ನಿರ್ದಯಿ ಸರಕಾರದ ಅಮಾನವೀಯ ನಿರ್ಧಾರವನ್ನು ಕಟುವಾಗಿ ಟೀಕಿಸಿದರು.
ಸೋಮವಾರದಿಂದ ಆರಂಭಿಸಿರುವ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸ ಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು ಹಾಗೂ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ನಿರಂತರವಾಗಿ ನಡೆಯುತ್ತದೆಂದು ಹೇಳಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷರೂ ಆಗಿರುವ ಬಳ್ಳಾರಿ ಜಿಲ್ಲಾ ಸರಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಟಿ. ದುರುಗಪ್ಪ, ಪದಾಧಿಕಾರಿಗಳಾದ ಸಿದ್ದೇಶ್, ರಮೇಶ್, ಭರತ್ ಕುಮಾರ್, ಯರಿಸ್ವಾಮಿ, ರಾಯಚೂರು ಜಿಲ್ಲೆಯ ಮುಖಂಡರಾದ ಸುರೇಶ್ ಬಳಗನೂರು ಸೇರಿದಂತೆ ವಿವಿಧ ಜಿಲ್ಲೆಯ ಪದಾಧಿಕಾರಿಗಳು, ಸಾವಿರಾರು ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.
(ವರದಿ: ಸುರೇಶ ಬಳಗಾನೂರು, ಮಸ್ಕಿ)
