
ಬೆಂಗಳೂರು: ತಾವು ಓದಿದ ಚನ್ನರಾಯಪಟ್ಟಣ ತಾಲೂಕು ತಗಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ಶಾಲಾ ಮಕ್ಕಳೊಂದಿಗೆ ಸಂವಿಧಾನ ದಿನಾಚರಣೆ ಆಚರಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಮತ್ತು ಸಂವಿಧಾನ ಪೀಠಿಕೆಯ ಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದ ಅವರು, ನ.26 ಭಾರತೀಯ ಇತಿಹಾಸದಲ್ಲಿ ಸಂವಿಧಾನವನ್ನು ಒಪ್ಪಿಸಿದ ಮಹತ್ವದ ದಿನವಾಗಿದೆ ಎಂದು ಹೇಳಿದರು.
ಧ್ವನಿ ಇಲ್ಲದವರಿಗೆ, ನೊಂದವರು, ಅಶಕ್ತರು, ದೀನ ದಲಿತರಿಗೆ ಸಂವಿಧಾನದಿಂದ ಭರವಸೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಸಾಮಾಜಿಕ ಪರಿಕಲ್ಪನೆಯಲ್ಲಿ ಬಹುದೊಡ್ಡ ಬದಲಾವಣೆ ಸಾಧ್ಯವಾಗಿದೆ. ಪ್ರತಿಯೊಬ್ಬರು ಸಮಾನ ಹಕ್ಕುಗಳನ್ನು ಹೊಂದಲು ಸಾಧ್ಯವಾಗಿದ್ದಕ್ಕೆ ಸಂವಿಧಾನವೇ ಕಾರಣ ಎಂದು ತಿಳಿಸಿದರು.
ದೇಶದ ಕಟ್ಟ ಕಡೆಯ ವ್ಯಕ್ತಿ ಕೂಡ ಸಂವಿಧಾನ ಶಕ್ತಿಯನ್ನು ಬಳಸಿಕೊಂಡು ಯಾವುದೇ ಹುದ್ದೆಗಳಿಗೇರಲು ಸಾಧ್ಯವಿದೆ. ಜಗತ್ತಿನಲ್ಲಿಯೇ ಭಾರತ ಸಂವಿಧಾನ ಮಾದರಿ ಸಂವಿಧಾನವಾಗಿದೆ. ಇದರ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಮುಖ್ಯ ಶಿಕ್ಷಕಿ ರೂಪ ಅವರು ಮಾತನಾಡಿ, ಇದೇ ಶಾಲೆಯಲ್ಲಿ ಓದಿದ ಶಿವಾನಂದ ಅವರು, ಇಂದು ರಾಜ್ಯ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿದ್ದಾರೆ. ಮನಸ್ಸು ಮಾಡಿದರೆ, ಸದಾ ಪ್ರಯತ್ನಶೀಲರಾಗಿದ್ದರೆ ಎಲ್ಲವೂ ಸಾಧ್ಯವಿದೆ ಎನ್ನುವುದಕ್ಕೆ ಇವರೇ ಉದಾಹರಣೆ ಎಂದು ಕೊಂಡಾಡಿದರು.

ಶಿಕ್ಷಕರಾದ ಕುಮಾರ್ ಮಾತನಾಡಿ, ತಾವು ಓದಿದ ಶಾಲೆಯನ್ನು ನೆನಪಿಸಿಕೊಂಡು ಇಲ್ಲಿಗೆ ಬಂದಿರುವುದು ನಮಗೆ ಅಭಿಮಾನ ಹೆಚ್ಚಿಸಿದೆ. ಸರ್ಕಾರಿ ಶಾಲೆಯಲ್ಲಿ ಓದಿದವರು ಏನಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ತಗಡೂರು ಅವರೇ ಉದಾಹರಣೆ ಎಂದರು. ಶಿಕ್ಷಕರಾದ ಹೇಮಲತಾ, ಗ್ರಾಮಸ್ಥರಾದ ಚಂದ್ರು ಮತ್ತಿತರರು ಹಾಜರಿದ್ದರು.
ಹಳೆ ಘಟನಾವಳಿ ಮೆಲುಕು: 1ರಿಂದ 7ನೇ ತರಗತಿ ತನಕ ಈ ಶಾಲೆಯಲ್ಲಿ ಓದುವಾಗ ನಡೆದ ಘಟನಾವಳಿಗಳನ್ನು ನೆನಪಿಸಿಕೊಂಡ ಶಿವಾನಂದ ತಗಡೂರು ಅವರು, ತಾವು ಕುಳಿತು ಪಾಠ ಕೇಳುತ್ತಿದ್ದ ಕೊಠಡಿಗಳಿಗೂ ಭೇಟಿ ನೀಡಿದ್ದರು. ಅಂದು ಬಾರಿಸುತ್ತಿದ್ದ ಶಾಲೆಯ ಗಂಟೆಯನ್ನು ಅವರೇ ಹೊಡೆದು ಆನಂದಿಸಿದರು. ವಿದ್ಯಾರ್ಥಿಗಳಾಗಿದ್ದಾಗ ನೆಟ್ಟಿದ್ದ ತೆಂಗಿನ ಸಸಿಗಳು ಇಂದು ಮರವಾಗಿ ಫಲ ಬಿಡುತ್ತಿರುವ ಬಗ್ಗೆಯೂ ಸಂತೋಷಪಟ್ಟರು.
