ಒಂದು ಮೌನದ ನಂತರ…
ಬಯಲಲ್ಲಿ ಗೋಡೆ ಎಬ್ಬಿಸಿ
ಮನೆ ಕಟ್ಟುವುದನ್ನು
ಕಲಿತೆವು.
ಜಿಜ್ಞಾಸೆಯ ಬೆಳಕಲ್ಲಿ
ಬದುಕು
ಪ್ರೀತಿ, ಆತ್ಮೋದ್ಧಾರ ಕುರಿತು
ಮಾತಾಡಿದೆವು.
ನಾಗರೀಕತೆ ಬೆಳೆದಂತೆ
ಸಂಸ್ಕೃತಿ
ಸಂಸ್ಕಾರ ಹೂವಾಗಿ
ಅರಳಬೇಕಿತ್ತು.
ನದಿ ಹರಿದ ಹಾಗೆ; ನೆರಳು
ಹಿಡಿಯಲು-
ಹೊರಟು, ಬಲೆಯಲ್ಲಿ
ಸಿಲುಕಿಕೊಂಡೆವು.
ಮನಸುಗಳ
ನಡುವೆ ಗೋಡೆ ಕಟ್ಟುವ
ಕೌಶಲ್ಯ ಬಲ್ಲೆವು.
ಈಶ್ವರ ಅಲ್ಲಾ ತೇರೋ ನಾಮ್
ಮರೆತೆವು.

-ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು
