ಅನುದಿನ ಕವನ-೧೮೯೦, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಕನ್ನಡತಿ… ಮಗಳು…

ಕನ್ನಡತಿ… ಮಗಳು…

ಹೂ ಅರಳುವಷ್ಟೆ
ಲಯ ನಿನ್ನ ಮಾತುಗಳು
ಥೇಟ್ ಜೇನಿನ ಮಾಧುರ್ಯ…

ಬೆಳಕಿನಂಗಡಿ ಗೂಡುಕಟ್ಟಿ
ಚಿತ್ತಾರ ಮೂಡಿಸಿದಷ್ಟೆ
ನಿನ್ನ ಹೆಜ್ಜೆ ಗುರುತುಗಳು
ಕತ್ತಲ ರಾತ್ರಿಗೆ ಮಿನುಗು ತಾರೆ
ಆಗೆ,
ನನ್ನ ಕವಿತೆಗೆ ತಿರುವಿದ ಪದಗಳು….

ಗೋಡೆಗಂಟಿ ಕುಂತ ಚಿಟ್ಟೆಗಳು
ಕುಣಿಯುವಷ್ಟು ನಾದ ನೀನಾದ
ಹೊಸ ಮನೆಯ ಮೂಲೆ ಮೂಲೆಗೆ
ನಿನ್ನ ದನಿಯ ಇಂಪು
ಸರಾಗವಾಗಿ ಕೇಳುವುದು ಕಿವಿಗೆ
ನಿನ್ನ ಕನ್ನಡ ಮಾತಿನ ಕಂಪು…

ಕಣ್ಣು ಎತ್ತ ಹೊರಳಿದರೂ
ನಿನ್ನ ದಾರಿಗೆ ಕಾವಲು ನಾನು
ಮುಂಚೂಣಿಯಲ್ಲೆ ಇರುವೆನು
ನಿನ್ನ ಗೆಲುವಿಗೆ ಜೊತೆಯಾಗಿ ನಾನು…


-ಸಿದ್ದು ಜನ್ನೂರ್, ಚಾಮರಾಜನಗರ