ಡಾ. ಭರಣಿ ವೇದಿಕೆಯಿಂದ ಮಂಜುನಾಥ ಗೋವಿಂದವಾಡ ಅವರ ಹೆಸರಿನಲ್ಲಿ ಉದಯೋನ್ಮುಖ ಚಿತ್ರಕಲಾವಿದರಿಗೆ ಪ್ರಶಸ್ತಿ -ಸಿ.ಮಂಜುನಾಥ

ಬಳ್ಳಾರಿ, ಜೂ.21: ಹೆಸರಾಂತ ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ ಅವರ ಹೆಸರಿನಲ್ಲಿ ಪ್ರಸಕ್ತ ಸಾಲಿನಿಂದ ಉದಯೋನ್ಮುಖ ಚಿತ್ರಕಲಾವಿದರಿಗೆ ಪ್ರಶಸ್ತಿ ನೀಡಿ ಉತ್ತೇಜಿಸಲಾಗುವುದು ಎಂದು ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.‌ಮಂಜುನಾಥ್ ಅವರು ಪ್ರಕಟಿಸಿದರು.

ನಗರದ ಸ್ನೇಹ ಸಂಪುಟ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕರ್ನಾಟಕ ಲಲಿತಕಲಾ ಅಕಾಡೆಮಿಯ ವರ್ಣಶ್ರೀ ಪ್ರಶಸ್ತಿ ಪುರಸ್ಕೃತ ಲಿಂಗೈಕ್ಯ ಮಂಜುನಾಥ ಗೋವಿಂದವಾಡ
ಅವರಿಗೆ ಸಲ್ಲಿಸಲಾದ ನುಡಿನಮನ ಕಾರ್ಯಕ್ರಮದಲ್ಲಿ
ಅವರು ಮಾತನಾಡಿದರು.
ಮಂಜುನಾಥ ಗೋವಿಂದವಾಡ ಅವರು ಎರಡೂವರೆ ದಶಕಗಳ ಕಾಲ ಚಿತ್ರಕಲಾ ಕ್ಷೇತ್ರ ಹಾಗೂ ಸಾಂಸ್ಕೃತಿಕ ಸಂಘಟನೆಗೆ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಇವರ ಸಾರ್ಥಕ ಜೀವನ,  ಸಾಧನೆ ಯುವಕರಿಗೆ ಸ್ಫೂರ್ತಿಯಾಗಿಸಲು ಹಾಗೂ ಇವರ ಹೆಸರು ಸಮಾಜದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಭರಣಿ ವೇದಿಕೆ ಪ್ರತಿ ವರ್ಷವೂ ಇವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.


ಮುಖ್ಯ ಅತಿಥಿ ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಅವರು ಮಾತನಾಡಿ ಸರಳ ಸಜ್ಜನಿಕೆ ವ್ಯಕ್ತಿತ್ವದ ಗೋವಿಂದವಾಡ ಅವರು ತಮ್ಮ ಪ್ರತಿಭೆಯಿಂದ ಪ್ರತಿಯೊಬ್ಬರನ್ನು ಸೆಳೆಯುತ್ತಿದ್ದರು. ಇವರ ಅಕಾಲಿಕ‌ ನಿಧನ ಚಿತ್ರಕಲಾ ಕ್ಷೇತ್ರವನ್ನು ಬಡವಾಗಿಸಿದ್ದು ಇವರ ಕುಟುಂಬವನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ದುಃಖ ವ್ಯಕ್ತಪಡಿಸಿದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ ಟಿ.‌ಕೊಟ್ರಪ್ಪ ಅವರು ಮಾತನಾಡಿ
ಮಂಜುನಾಥ ಗೋವಿಂದವಾಡ ಅವರು
ಚಿತ್ರಕಲೆಯಲ್ಲಿ ಪರಿಣತಿಯನ್ನು ಪಡೆದಿದ್ದರು. ಆಕರ್ಷಕ ವೇದಿಕೆ ನಿರ್ಮಿಸುವುದರಲ್ಲಿ ನಿಪುಣರಾಗಿದ್ದರು ಎಂದು ಶ್ಲಾಘಿಸಿದರು.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಇವರ ಕುಟುಂಬಕ್ಕೆ ಸಹಾಯ ಮಾಡುವ ಭರದಲ್ಲಿ ಘನತೆಗೆ ಧಕ್ಕೆ‌ಬಾರದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಸಂಘ ಸಂಸ್ಥೆಗಳಿಗೆ ಕಿವಿ ಮಾತು ಹೇಳಿದರು.

ಪತ್ರಕರ್ತ ಕೆ ಎಂ ಮಂಜುನಾಥ ಮಾತನಾಡಿ ಪ್ರತಿಭಾವಂತ ಗೋವಿಂದವಾಡ ಅವರು ಸ್ವಾಭಿಮಾನಿಯಾಗಿದ್ದರು. ತೀರ ಸಂಕಷ್ಟದಲ್ಲಿದ್ದರೂ ಯಾರಲ್ಲೂ ತಮ್ಮ ಕಷ್ಟಗಳನ್ನು ಹೇಳಿಕೊಂಡವರಲ್ಲ. ಹಲವು ತಿಂಗಳುಗಳ ಹಿಂದೆ ಮಕ್ಕಳ ಶಾಲಾ‌ ಕಾಲೇಜು ಫೀ ಕಟ್ಟಲು ವಿಮಾ‌ ಪಾಲಿಸಿಯನ್ನು ಸರೆಂಡರ್ ಮಾಡಿ ಹಣಪಡೆದಿರುವುದು ಅವರ ನಿಧನದ ಬಳಿಕ ತಿಳಿಯಿತು. ಪಾಲಿಸಿಯನ್ನು ಸರೆಂಡರ್ ಮಾಡದಿದ್ದರೆ ಇದೀಗ ಕುಟುಂಬಕ್ಕೆ ಆರ್ಥಿಕ ಸಹಾಯವಾಗುತ್ತಿತ್ತು ಎಂದು ತಿಳಿಸಿದರು.
ಇವರ ಕುಟುಂಬಕ್ಕೆ ಯಾವ ರೀತಿ ಆರ್ಥಿಕ ಸಹಾಯ ಮಾಡಲು ಸಹೃದಯ ಸಂಘ ಸಂಸ್ಥೆಗಳು, ಗಣ್ಯರು ಯೋಜನೆ‌ ಹಾಕಿಕೊಳ್ಳುವ ಅಗತ್ಯವಿದೆ. ಪ್ರತಿಯೊಬ್ಬರೂ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಹಿರಿಯ ಪತ್ರಕರ್ತ ಎಂ. ಅಹಿರಾಜ್ ಅವರು ಮಾತನಾಡಿ, ಮಂಜುನಾಥ ಅವರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಯೋಜನೆಯೊಂದನ್ನು ಹಿತೈಷಿಗಳು ಹಾಕಿಕೊಳ್ಳಬೇಕು. ಕಲಾಕೃತಿಗಳು ಮಾರಾಟವಾದರೆ ಇವರ ಕುಟುಂಬಕ್ಕೆ ನೆರವಾಗುತ್ತದೆ.
ಸಹಾಯ ಮಾಡುವ ದೊಡ್ಡ ಮನಸುಗಳು ನಗರದಲ್ಲಿವೆ. ಎಲ್ಲರೂ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸ ಬೇಕು ಎಂದು ಸಲಹೆ ನೀಡಿದರು.


ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಮಾತನಾಡಿ, ಅದ್ಭುತ ಪ್ರತಿಭೆಯಾಗಿದ್ದ ಗೋವಿಂದವಾಡ ಅವರು ಮಾಜಿ ಉಪ ಮುಖ್ಯಮಂತ್ರಿ ಎಂ. ಪಿ. ಪ್ರಕಾಶ್ ಅವರ ಕಣ್ಣಿಗೆ ಬೀಳಬೇಕಿತ್ತು. ಹಲವು ಕೊರತೆಗಳ‌ ನಡುವೆಯೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮಂಜುನಾಥ ಅವರ ಕುಟುಂಬದ ಆರ್ಥಿಕ ನೆರವಿಗೆ ಸಮಾನ‌ಮನಸ್ಕರಂತೆ ತಾವು ಬದ್ಧರಾಗಿರುವುದಾಗಿ ಹೇಳಿದರು.
ಕನ್ನಡ ಪರ ಹೋರಾಟಗಾರ ಪಿ. ಶೇಖರ್, ವೀವಿ ಸಂಘದ ಸ್ವತಂತ್ರ ಪಿಯು ಕಾಲೇಜಿನ ಪ್ರಾಚಾರ್ಯ, ರಂಗ ಕಲಾವಿದ ಎಎಂಪಿ ವೀರೇಶಸ್ವಾಮಿ,
ಮುಖ್ಯ ಗುರು ಸಿದ್ದೇಶ್ವರ ಸ್ವಾಮಿ ಎಸ್. ಎಂ., ಅಧ್ಯಾಪಕ ರುದ್ರಮುನಿ, ಮಂಜುನಾಥ ಸಹೋದರ ನಾಗಭೂಷಣ ಗೋವಿಂದವಾಡ ಮತ್ತಿತರರು ಮಾತನಾಡಿದರು.
ಶ್ರೀ ಕಲ್ಯಾಣ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.


ಕವನ ವಾಚನ: ರಾಯಚೂರು ವಿಶ್ರಾಂತ ಡಿಡಿಪಿಐ, ಸಾಹಿತಿ ಎಚ್ ಎಂ ಮಲ್ಲಿಕಾರ್ಜುನ ಸ್ವಾಮಿ ಅವರು ಗೋವಿಂದವಾಡ ಅವರ ಕುರಿತು ರಚಿಸಿದ ಕವಿತೆಯನ್ನು ಸಿ. ಮಂಜುನಾಥ ಮತ್ತು ಸತ್ಯಂ‌ ಬಿಇಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆಲಂ ಭಾಷಾ ಅವರು ಸ್ವ ರಚನೆಯ ಕವನ ವಾಚಿಸಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ವರ್ಣಶ್ರೀ ಪ್ರಶಸ್ತಿಗೆ ಭಾಜನರಾದ ಚಿತ್ರಕಲಾವಿದ ಮಹಮ್ಮದ್ ರಫಿ, ಸಾಹಿತಿ ಎಚ್ ಎಂ ಮಲ್ಲಿಕಾರ್ಜುನ ಸ್ವಾಮಿ (ಮಹಿಮ), ರಂಗ ತೋರಣದ ಪ್ರಭುದೇವ್ ಕಪ್ಪಗಲ್ಲು, ರಂಗಕಲಾವಿದ ಅಮರೇಶಯ್ಯ, ಸಾಹಿತಿ ಅಬ್ದುಲ್‌ ಹೈ, ಅಧ್ಯಾಪಕರಾದ ಗಿರಿಜಾಪತಿ, ರಂಗಸಮಾಜದ ಮಾಜಿ ಸದಸ್ಯ ಶಿವೇಶ್ವರ ಗೌಡ ಕಲ್ಲುಕಂಬ, ಶರಭಯ್ಯ, ಪತ್ರಕರ್ತರಾದ ಸಿದ್ಧರಾಮಪ್ಪ ಸಿರಿಗೇರಿ, ಗೋವರ್ಧನ ರೆಡ್ಡಿ, ಕಲಾಂದರ್ ಮತ್ತಿತರರು ಉಪಸ್ಥಿತರಿದ್ದರು.


ನಾಡೋಜ ಬುರ್ರಕಥಾ ಈರಮ್ಮ ಫೌಂಡೇಷನ್ ಅಧ್ಯಕ್ಷ ಡಾ. ಅಶ್ವರಾಮು ಅವರು ಸ್ವಾಗತಿಸಿ ನಿರೂಪಿಸಿದರು. ಭರತನಾಟ್ಯ ಕಲಾವಿದೆ ಅವನೀ ಗಂಗಾವತಿ ಪ್ರಾರ್ಥಿಸಿದರು. ಹಂದ್ಯಾಳ್ ಶ್ರೀ ಮಹಾದೇವತಾತ ಕಲಾ ಸಂಘದ ಅಧ್ಯಕ್ಷ, ಹಿರಿಯ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್ ವಂದಿಸಿದರು.
ನಗರದ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ, ಹಳೇ ದರೋಜಿ  ನಾಡೋಜ ಬುರ್ರಕಥಾ ಈರಮ್ಮ ಫೌಂಡೇಷನ್,  ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕ ಬಳ್ಳಾರಿ ಹಾಗೂ ಶ್ರೀ ಮಹಾದೇವತಾತ ಕಲಾ ಸಂಘ ಹಂದ್ಯಾಳ ಇವರ ಸಂಯುಕ್ತಾಶ್ರಯದಲ್ಲಿ
ಕಾರ್ಯಕ್ರಮ ಜರುಗಿತು.


—–

Leave a Reply

Your email address will not be published. Required fields are marked *