
ಬಳ್ಳಾರಿ, ಆ.15: ಜಾನಪದವು ವಿದ್ಯಾರ್ಥಿಗಳಿಗೆ ಸಂಸ್ಕೃತಿ, ನೈತಿಕ ಮೌಲ್ಯಗಳನ್ನು ಪರಿಚಯಿಸುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ, ಈಶಾನ್ಯ ಟೈಮ್ಸ್ ಜಿಲ್ಲಾ ವರದಿಗಾರ ಸಿ.ಮಂಜುನಾಥ ಅವರು ತಿಳಿಸಿದರು.
ಜಿಲ್ಲೆಯ ಸಂಡೂರು
ತಾಲೂಕಿನ ವಿಠ್ಲಾಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ಶುಕ್ರವಾರ ಗ್ರಾಮದ ಶ್ರೀ ಹಂಪಿ ವಿರುಪಾಕ್ಷ ಬಯಲಾಟ ನಾಟಕ ಪ್ರೋತ್ಸಾಹ ಟ್ರಸ್ಟ್ ಆಯೋಜಿಸಿದ್ದ ‘ಜಾನಪದ ಚಿತ್ತ ಕಾಲೇಜಿನತ್ತ ‘ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನ ಜೀವನದಲ್ಲಿ ಜಾನಪದ ಪಾತ್ರದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಾನಪದವು ಭಾಷಾ ಜ್ಞಾನವನ್ನು ಸುಲಭವಾಗಿ ಪರಿಚಯಿಸುತ್ತದೆ ಜತೆಗೆ
ಜನಪದ ಹಾಡುಗಳು, ಕಥೆಗಳು ಹಾಗೂ ಗಾದೆಗಳು ಮಕ್ಕಳಲ್ಲಿ ಗ್ರಹಿಕೆ ಶಕ್ತಿ, ಸೃಜನಶೀಲತೆ ಬೆಳೆಸಲು ಸಹಕಾರಿ ಎಂದು ಹೇಳಿದರು. ಪ್ರಸ್ತುತ ಕಾಲೇಜು ವಿದ್ಯಾರ್ಥಿಗಳಲ್ಲಿ ಹಾಗೂ ಯುವಜನತೆಯಲ್ಲಿ ನಾಡಿನ ಸಾಂಪ್ರದಾಯಿಕ ಜಾನಪದ ಕಲೆಗಳ ಬಗ್ಗೆ ಒಲವು ಹೆಚ್ಚಾಗುತ್ತಿದ್ದು ಉತ್ತಮ ಬೆಳವಣಿಗೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾಲೇಜುಗಳಲ್ಲಿ ಜಾನಪದ ಸ್ಪರ್ಧೆಗಳು, ಯುವ ಜನೋತ್ಸವಗಳು ಜನಪ್ರಿಯಗೊಳ್ಳುತ್ತಿವೆ. ಇದು ನಮ್ಮ ಸಂಸ್ಕೃತಿಯನ್ನುಳಿಸಲು ಮತ್ತು ಬೆಳೆಸಲು ಸಹಕಾರಿಯಾಗಿದೆ ಎಂದರು.

ಗ್ರಾಮೀಣ ಜಾನಪದ ಹಾಗೂ ಜಾನಪದದಲ್ಲಿ ಸ್ತ್ರೀಯರ ಸ್ಥಾನ ಮಾನ ಕುರಿತು ಉಪನ್ಯಾಸ ನೀಡಿದ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಸಹನ ಪಿಂಜಾರ್
ಅವರು, ಅಖಂಡ ಬಳ್ಳಾರಿ ಜಿಲ್ಲೆಯ ಹೆಮ್ಮೆಯ ನಾಡೋಜ ದರೋಜಿ ಬುರ್ರಕಥಾ ಈರಮ್ಮ, ನಾಡೋಜ ಕಪ್ಪಗಲ್ಲು ಪದ್ಮಮ್ಮ ಸೇರಿದಂತೆ ಹಲವು ಸಾಧಕರು ತಮ್ಮ ಪ್ರತಿಭೆಯ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ ಎಂದರು.
ಗ್ರಾಮೀಣ ಜೀವನದಲ್ಲಿ ಜಾನಪದವು ಕೇವಲ ಮನರಂಜನೆಯ ಸಾಧನವಲ್ಲ ಅದು ಹಳ್ಳಿಗರ ಉಸಿರು ಮತ್ತು ಜೀವನಾಡಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಪುರಷರ ಪ್ರಾಬಲ್ಯ ಇರುವ ಬಯಲಾಟದಲ್ಲಿ ಕೀಳಿರಿಮೆ ಬಿಟ್ಟು ಮಹಿಳೆಯರು ಸ್ತ್ರೀ ಪಾತ್ರದ ಜತೆಗೆ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಲು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಜಿಪಂ ಸದಸ್ಯ ಎಂ. ತಿರುಮಲ ಅವರು, ಟಿವಿ ಹಾಗೂ ಸಾಮಾಜಿಕ ಜಾಲಗಳ ಹಾವಳಿಯಿಂದ ಜಾನಪದ ಜನರಿಂದ ದೂರ ಸರಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಾನಪದ ಕಲೆಗಳ ಬೆಳವಣಿಗೆ, ಜಾನಪದ ಕಲಾವಿದರ ಅಭಿವೃದ್ಧಿಗೆ ಸರಕಾರ ವಿಶೇಷ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಿ. ಯರಿಯಪ್ಪ ಮಾತನಾಡಿ, ಜಾನಪದ ಕಲೆ, ಸಂವರ್ಧನೆ, ಬೆಳವಣಿಗೆಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.

ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಶಿವಗಂಗಮ್ಮ, ಶಾಂತಿ ಮತ್ತಿತರರು ಮಾತನಾಡಿದರು.
ವಿದ್ಯಾರ್ಥಿನಿ ಕವನ ವಾಚಿಸಿ ಗಮನ ಸೆಳೆದರು.
ರಂಗಕರ್ಮಿ ರಿಯಾಜ್ ಶಿಮೊಗ್ಗೆ ಅವರು ರಂಗಗೀತೆ, ಹವ್ಯಾಸಿ ಕಲಾವಿದ ಮಹಾಜನದಹಳ್ಳಿ ಕೊಟ್ರೇಶ್ ಅವರು ಜಾನಪದ ಗೀತೆ ಹಾಡಿ ರಂಜಿಸಿದರು.
ಗ್ರಾಮದ ಮುಖಂಡರಾದ ತಾಯಪ್ಪ ಡಿ ವಡ್ಡು, ಎಂ. ಸಂಜೀವಪ್ಪ, ಹಾವಿನ ಮಡುಗು ಜಿ. ರಾಮಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹಳೆಯ ಮತ್ತು ಹಾಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಟ್ರಸ್ಟ್ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಜಿ.ಕೆ. ತಿಪ್ಪೇಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಟ್ರಸ್ಟ್ ಸದಸ್ಯ ಉಮಾಶಂಕರ್ ವಂದಿಸಿದರು.
*****
