ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಪುಸ್ತಕ ಹಿಡಿದುಕೊಳ್ಳಿ – ಶ್ರೀ ನಿರಂಜನ ಪ್ರಭು ಸ್ವಾಮೀಜಿ

ಬಳ್ಳಾರಿ ಜೂ. 1: ಇಂದು ಮೊಬೈಲ್ ಹಿಡಿದುಕೊಳ್ಳುವುದು ವಿದ್ಯಾರ್ಥಿಗಳಿಗೆ ಫ್ಯಾಷನ್ ಆಗಿದ್ದು, ಇದರಿಂದ ಅಭ್ಯಾಸಕ್ಕೆ ಅಡಚಣೆ ಆಗುವುದರ ಜೊತೆಗೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ ಕಾರಣ ಇಂದಿನ ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಪುಸ್ತಕವನ್ನು ಹಿಡಿದುಕೊಳ್ಳಿ ಆಗ ಮಾತ್ರ ನಿಮ್ಮಿಂದ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಕುರುಗೋಡು ಒಪ್ಪತ್ತೇಶ್ವರ ಮಠದ ಶ್ರೀ ನಿರಂಜನ ಪ್ರಭು ಸ್ವಾಮೀಜಿ ಅವರು ತಿಳಿಸಿದರು.

ಅವರು ಭಾನುವಾರ ನಗರದ ಅಲ್ಲಿಪುರ ಶ್ರೀ ಮಹದೇವ ತಾತ ಮಠದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಸಂಘದಿಂದ ಪದಾಧಿಕಾರಿಗಳ ಪದಗ್ರಹಣ ಮತ್ತು 10ನೇ ತರಗತಿ, ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.
ಪೋಷಕರು ತಮ್ಮ ಮಕ್ಕಳಿಗೆ ಕೇವಲ ವಿದ್ಯೆಯನ್ನು ಮಾತ್ರ ಕಲಿಸಿದರೆ ಸಾಲದು ಅವರಿಗೆ ಜೀವನದಲ್ಲಿ ಅತ್ಯಂತ ಅವಶ್ಯಕವಿರುವ ಸಂಸ್ಕಾರವನ್ನು ಕಲಿಸಬೇಕು, ಇಂದಿನ ಯುವಕರು ಮತ್ತು ವಿದ್ಯಾರ್ಥಿಗಳು ಮೊಬೈಲ್ ಹಿಂದೆ ಬಿದ್ದು ಸಂಸ್ಕಾರವನ್ನೇ ಮರೆತಿದ್ದಾರೆ, ಮೊಬೈಲ್ ಬಿಟ್ಟು ಪುಸ್ತಕ ಹಿಡಿದುಕೊಂಡಲ್ಲಿ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ ಎಂದರು.
ಪ್ರತಿಭಾ ಪುರಸ್ಕಾರ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಮತ್ತು ಬಡ ವಿದ್ಯಾರ್ಥಿಗಳಿಗೆ ಅಥವಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವುದರಿಂದ ಅವರ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಇದನ್ನು ಮನಗಂಡ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಬೇಕೆಂದು ತೀರ್ಮಾನಿಸಲಾಗಿದೆ ಅದರಂತೆ ಈ ವರ್ಷ ಸುಮಾರು 300 ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಂಎಸ್ ಭದ್ರಯ್ಯ ತಿಳಿಸಿದರು.

ದಿವ್ಯ ಸಾನಿಧ್ಯವನ್ನು ನಂದಿಪುರ ಕ್ಷೇತ್ರದ ಶ್ರೀ ಮಹೇಶ್ವರ ಸ್ವಾಮೀಜಿ,  ಶ್ರೀಧರಗಡ್ಡೆ ವಿರಕ್ತಮಠದ   ಕೊಟ್ಟೂರು ಶ್ರೀ ಗಳು  ವಹಿಸಿದ್ದರು.

ಸಂಘದ ರಾಜ್ಯಾಧ್ಯಕ್ಷ ಸೋಮಶೇಖರಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಮಿಗಳಾದ ಡಾ. ಯಶವಂತ್ ಭೋಪಾಲ್, ಎಂಜಿ ಗೌಡ, ಕಣೆಕಲ್ ಮಹಾಂತೇಶ್, ದರೂರು ಶಾಂತನಗೌಡ ಅವರು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯ ಸುರೇಖಾ ಮಲ್ಲನಗೌಡ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಪತ್ರಿ ಬಸಪ್ಪ ವಿಶ್ವನಾಥ್ ಹಿರೇಗೌಡ ದಂಡಿನ ಶಿವಾನಂದ, ಡಾ. ಅರವಿಂದ್ ಪಟೇಲ್ ಕೋರಿ ವಿರೂಪಾಕ್ಷಪ್ಪ, ಅಲ್ಲಮ ಪ್ರಶಾಂತ್, ಸಂಗನಕಲ್ಲು ಬಸವರಾಜ್, ಮಸೀದಿಪುರ ಸಿದ್ದರಾಮನಗೌಡ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.

ಉಪನ್ಯಾಸ: ಕಿಷ್ಕಿಂದ ವಿಶ್ವವಿದ್ಯಾಲಯದ ಡೀನ್ ಡಾ. ಎಸ್. ಮಂಜುನಾಥ್ ಅವರು, ಎಸ್ ಎಸ್ ಎಲ್ ಸಿ- ಪಿಯುಸಿ ನಂತರ ಮುಂದೇನು ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಎಚ್.ಎಮ್. ಚನ್ನಬಸವ ಸ್ವಾಮಿ, ಕೋಶಾಧ್ಯಕ್ಷ ಕೋಳೂರು ವೆಂಕಟೇಶ ಗೌಡ, ಪ್ರಧಾನ ಕಾರ್ಯದರ್ಶಿ ಬಿಸಿಲಹಳ್ಳಿ ಬಸವರಾಜ್ ಸೇರಿದಂತೆ ಕಾರ್ಯಕಾರಿಣಿ ಸಮಿತಿ ಸದಸ್ಯರು, ಸಂಘದ ಸದಸ್ಯರು, ವೀರಶೈವ ಲಿಂಗಾಯತ ಸಮಾಜ ಬಂದುಗಳು ಇದ್ದರು.
ಈ ಸಂದರ್ಭದಲ್ಲಿ 300ಕ್ಕೂ ಹೆಚ್ಚು 10ನೇ ತರಗತಿ ಮತ್ತು ಪಿಯುಸಿಯಲ್ಲಿ ಶೇಕಡಾ 85 ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ ವೀರಶೈವ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ‌ ಗೌರವಿಸಲಾಯಿತು.