ಬಳ್ಳಾರಿ ಜೂ. 26 :ನಗರದ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಸಮರ್ಪಕ ರೀತಿಯಲ್ಲಿ ಒದಗಿಸಲು ಆಗ್ರಹಿಸಿ ಜೂ. 30 ರಿಂದ ಜು. 23 ವರೆಗೆ ನಗರದ ಕೌಲ್ ಬಜಾರ್, ಮೋತಿ ಸರ್ಕಲ್, ದುರ್ಗಮ್ಮ ಗುಡಿ, ರಾಯಲ್ ಸರ್ಕಲ್ ಸೇರಿದಂತೆ ಹಲವಾರು ಕಡೆಯಲ್ಲಿ ಒಂದು ಲಕ್ಷ ಸಹಿಯನ್ನು ಸಂಗ್ರಹಿಸುವ ಮೂಲಕ ಪ್ರತಿಭಟನೆಯನ್ನು ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಹಮ್ಮಿಕೊಳ್ಳಲಾಗುವುದು ಎಂದು ಸಂಚಾಲಕ ಸೋಮಶೇಖರ್ ಅವರು ತಿಳಿಸಿದರು. ಅವರು ಗುರುವಾರ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಮಾತನಾಡಿದರು.
ನಗರದ ಕುಡಿಯುವ ನೀರಿನ ನಳಗಳಲ್ಲಿ ಚರಂಡಿ ನೀರು ಮಿಶ್ರಣವಾಗುವುದನ್ನು ತಡೆಯಬೇಕು. ನಗರಕ್ಕೆ ರಿಂಗ್ ರಸ್ತೆ ನಿರ್ಮಾಣ, ಮೋತಿ ಬ್ರಿಡ್ಜ್ ಅಗಲೀಕರಣ, ಸುಧಾ ಕ್ರಾಸ್ ಮೇಲ್ ಸೇತುವೆ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು. ನಗರದ ಪ್ರಮುಖ ಸ್ಥಳಗಳಲ್ಲಿ ಕಾಮಗಾರಿಗಳನ್ನು ಮುಗಿಸಿದ ಮೇಲೆ ಮತ್ತೊಂದನ್ನು ಕೈಗೊಳ್ಳುವುದು ವೈಜ್ಞಾನಿಕ ಆದರೆ ಅನಾವಶ್ಯಕ ಕಾಮಗಾರಿಗಳನ್ನು ಆರಂಭಿಸುತ್ತಿದ್ದಾರೆ. ಇದರಿಂದ ಬಳ್ಳಾರಿ ನಗರದ ಸಾರ್ವಜನಿಕರಿಗೆ ಬಹಳ ತೊಂದರೆ ಆಗುತ್ತಿದೆ ಎಂದು ದೂರಿದರು. ನಗರದ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಹೋರಾಟ ಸಮಿತಿ ನಗರ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಗಳು ಸೇರಿದಂತೆ ಹಲವರಿಗೆ ಮನವಿ ಮಾಡಿದೆ. ಆದರೆ ನಗರಕ್ಕೆ ಮೂಲ ಸೌಲಭ್ಯ ಕಲ್ಪಿಸಿ ಕೊಡುವಲ್ಲಿ ವಿಫಲರಾಗಿದ್ದಾರೆ ಎಂದರು.
ಈ ಹಿನ್ನಲೆಯಲ್ಲಿ ಜು. 27ರಂದು ಬೃಹತ್ ಸಮಾವೇಶವನ್ನು ನಗರದಲ್ಲಿ ಸಂಘಟಿಸಲು ನಿರ್ಧರಿಸಲಾಗಿದೆ, ಈ ಹೋರಾಟಕ್ಕೆ ಬಳ್ಳಾರಿಯ ನಾಗರಿಕರು ಎಲ್ಲ ರೀತಿಯಿಂದ ಬೆಂಬಲಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಉಪನ್ಯಾಸಕ ಯು ನರಸಣ್ಣ, ಮುರ್ಚಾಜ್ ಸಾಬ್, ಡಾ. ಪ್ರಮೋದ್, ಎಸ್ ಯು ಸಿ ಐ ನ ಗೋವಿಂದ, ವಿದ್ಯಾ ಮತ್ತಿತರರು ಇದ್ದರು.